ಬೆಳ್ತಂಗಡಿ: ಮುಂಬಯಿಯ ಭ್ರಾ ಮರಿ ಯಕ್ಷ ನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ ) ವತಿಯಿಂದ ಮೇ 6 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗು ಬಾಲಪ್ರತಿಭೆಗಳ ಯಕ್ಷಗಾನ ಪ್ರದರ್ಶನ ನಡೆಯಿತು.
ಧರ್ಮಾಧಿಕಾರಿ ಡಾ! ಡಿ ವೀರೇಂದ್ರ ಹೆಗ್ಗಡೆಯವರು ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ .ದೇವಾಡಿಗ ಅವರಿಗೆ” ಭ್ರಮರ ಕಲಾ ಪೋಷಕ” ಪ್ರಶಸ್ತಿ ,ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು .ದೇವಾಡಿಗ ಅವರಿಗೆ” ಯಕ್ಷ ಭ್ರಾಮರಿ “ಪ್ರಶಸ್ತಿ ಹಾಗು ಉಜಿರೆಯ ಯಕ್ಷಗಾನ ಹಿಮ್ಮೇಳ ಗುರು ಮೋಹನ ಬೈಪಾಡಿತ್ತಾಯ ಅವರಿಗೆ” ಭ್ರಮರ ಕಲಾ “ಪ್ರಶಸ್ತಿ ಪ್ರದಾನ ಗೈದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಕ್ಷ ಗುರು ಮೋಹನ ಬೈಪಾಡಿತ್ತಾಯ ಅವರು ತನಗೆ ಹತ್ತಾರು ಸನ್ಮಾನ, ಪ್ರಶಸ್ತಿಗಳು ಬಂದರೂ ಶ್ರೀ ಕ್ಷೇತ್ರದಲ್ಲಿ ಪೂಜ್ಯ ಡಾ! ಹೆಗ್ಗಡೆಯವರಿಂದ ಪ್ರಶಸ್ತಿ ಸ್ವೀಕರಿಸಿರುವುದು ತನ್ನ ಸುಯೋಗ . ತನ್ನ ಕಲಾ ಸೇವೆಯನ್ನು ಗುರುತಿಸಿ ಪುಣ್ಯ ಕ್ಷೇತ್ರದಲ್ಲಿ ಸನ್ಮಾನಿಸಿರುವುದು ಸಂತೋಷದಾಯಕ . ತನ್ನಿಂದ ಯಕ್ಷ ಕಲಾ ಸೇವೆ ನಿರಂತರವಾಗಿ ನಡೆಯಲು ಸ್ವಾಮಿಯ ಅನುಗ್ರಹವಿರಲಿ ಎಂದು ಆಶಿಸಿ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ ಶೆಟ್ಟಿ ಪುತ್ತೂರು, ಬಾರಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ತ ಹಿರಿಯಡ್ಕ ಮೋಹನದಾಸ್ ,ಉಪ್ಪುಂದ ದೇವಾಡಿಗ ಸಂಘದ ಗೌರವಾಧ್ಯಕ್ಷ ಜನಾರ್ದನ್ ದೇವಾಡಿಗ, ಕಲಾಪೋಷಕ ರಾಜೇಶ್ ಗೌಡ, ಮದ್ದಳೆವಾದಕ ಇನ್ನ ಆನಂದ ಶೆಟ್ಟಿಮತ್ತು ನವಿಮುಂಬಯಿ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.
ಧರ್ಮಾಧಿಕಾರಿ ಡಾ! ಡಿ . ವೀರೇಂದ್ರ ಹೆಗ್ಗಡೆಯವರು ಯಕ್ಷಗಾನ ತಂಡದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. .ನೆರುಲ್ ,ಸಾಕಿನಾಕಾ ,ಡೊಂಬಿವಿಲಿ ಮತ್ತು ದಹಿಸರ್ ವಿಭಾಗದ ಭ್ರಮರಿ ಯಕ್ಷ ನೃತ್ಯ ಕಲಾ ನಿಲಯದ ಬಾಲಪ್ರತಿಭೆಗಳಿಂದ “ಭಸ್ಮಾಸುರ ಮೋಹಿನಿ “ಕನ್ನಡ ಹಾಗು “ಶಶಿಪ್ರಭಾ ಪರಿಣಯ “ಪ್ರಸಂಗಗಳ ತುಳು ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.
ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿ ,ವಂದಿಸಿದರು.