ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಎ 14 ರಂದು ಪ್ರಾರಂಭಗೊಂಡ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ! ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆದು ಎ .21 ರಂದು ರಾತ್ರಿ ಬ್ರಹ್ಮ ರಥೋತ್ಸವ ದೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.
ಎ .21 ರಂದು ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಒಳಾಂಗಣದಲ್ಲಿ ನಾಲ್ಕು ಸುತ್ತು ಶ್ರೀ ದೇವರ ಬಲಿ ಉತ್ಸವ ನಡೆದು ,ರಥ ಶುದ್ಧಿ ಬಳಿಕ ವಿವಿಧ ವಾದ್ಯ ಮೇಳಗಳು,ಕ್ಷೇತ್ರದ ಆನೆಗಳು ,ಬಸವ,ಸಕಲ ಬಿರುದಾವಳಿಗಳು,ತಟ್ಟೀರಾಯ,ಬ್ಯಾಂಡ್
ವಾಲಗ,ಸ್ಯಾಕ್ಸೋಫೋನ್ ವಾದನ,ಶಂಖ ಜಾಗಟೆವಾದನ ಗಳೊಂದಿಗೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ದೇವರ ರಥಾರೋಹಣ ವೈಭವದಿಂದ ನಡೆಯಿತು. ಗೋವಿಂದನಾಮಸ್ಮರಣೆಯೊಂದಿಗೆ ಭಕ್ತರು ರಥವನ್ನು ಅಣ್ಣಪ್ಪ ಬೆಟ್ಟದವೆರೆಗೆ ಒಯ್ದು ,ಅಲ್ಲಿಂದ ಮರಳಿ ಸ್ವಸ್ಥಾನಕ್ಕೆ ತಂದರು. ಶ್ರೀ ದೇವರು ಒಳಾಂಗಣ ಕಟ್ಟೆಯಲ್ಲಿ ವಸಂತ ಪೂಜೆ ,ಅಷ್ಟಾವಧಾನ ಸೇವೆ ಬಳಿಕ ಗರ್ಭಗುಡಿ ಪ್ರವೇಶಿಸಿದರು .
ರಾತ್ರಿ ಭೂತಬಲಿ ನಡೆದು ,ಎ 22. ರಂದು ಬೆಳಿಗ್ಗೆ ಕವಾಟೋದ್ಘಾಟನೆ ನಡೆಯಿತು. ರಾತ್ರಿ ನೇತ್ರಾವತಿ ನದಿಯಲ್ಲಿ ಶ್ರೀ ದೇವರ ಅವಭ್ರತಸ್ನಾನ ನಡೆದು ಮರಳಿ ಬಂದ ಬಳಿಕ ಧ್ವಜಾವರೋಹಣ ನಡೆಯುವುದರೊಂದಿಗೆ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಸಂಭ್ರಮದಿಂದ ಸಂಪನ್ನಗೊಂಡಿತು. ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ, ಸುರೇಂದ್ರ ಕುಮಾರ್ ,ಹರ್ಶೆನ್ದ್ರ ಕುಮಾರ್ ,ಹೇಮಾವತಿ ಹೆಗ್ಗಡೆ,ರಾಜೇಂದ್ರ ಕುಮಾರ್ ಮತ್ತು ಹೆಗ್ಗಡೆ ಕುಟುಂಬಸ್ಥರು,ಕ್ಷೇತ್ರದ ಸಿಬ್ಬಂದಿ ವರ್ಗ ಹಾಗು ಊರ ಪರಊರ ಭಕ್ತಾದಿಗಳು ಸಂಭ್ರಮದಲ್ಲಿ ಭಾಗವಹಿಸಿದ್ದರು.