ಬೆಳ್ತಂಗಡಿ: ಈ ದೇಶದ ಸಾಮಾನ್ಯ ಪ್ರಜೆಯು ವಿವಿಧ ಕ್ಷೇತ್ರದಲ್ಲಿ ಸಮಾನತೆ ದೃಷ್ಟ್ಟಿಕೋನದಿಂದ ಬೆಳೆಯಬೇಕೆಂದು ಈ ದೇಶಕ್ಕೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ಡಾ| ಬಿ.ಆರ್.ಅಂಬೇಡ್ಕರ್ ತಂದುಕೊಟ್ಟರು. ಅಂತಹಾ ಗಣರಾಜ್ಯೋತ್ಸವ ಕಾಲಘಟದಲ್ಲಿ ನಾವಿಂದು ಪ್ರತಿ ಮನೆಯಲ್ಲೂ ಸಂವಿಧಾನದ ಪುಸ್ತಕವನ್ನಿಟ್ಟು ನಾವು ಓದಿ ಮಕ್ಕಳಿಗೂ ತಿಳಿಸುವ ಮೂಲಕ ಅಂಬೇಡ್ಕರ್ ಅವರ ಆಶಯವನ್ನು ಸಾಕಾರಗೊಳಿಸೋಣ ಎಂದು ಶಾಸಕ ಹರೀಶ ಪೂಂಜ ಕರೆ ನೀಡದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಳ್ತಂಗಡಿ ವತಿಯಿಂದ ಜ.೨೬ರಂದು ತಾಲೂಕು ಆಡಳಿತ ಸೌಧ ಆವರಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಡಾ| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದರು.
ಕಡುಬಡತನದಿಂದ ಹುಟ್ಟಿ ಬೆಳೆದ ಅಂಬೇಡ್ಕರ್ ಅವರು ಈ ಸಮಾಜ ದೇಶದ ಬಗ್ಗೆ ಒಂದೇ ರೀತಿಯ ಭಾವನೆಯನ್ನ ಇಟ್ಟುಕೊಂಡು ನಮ್ಮೆಲ್ಲರಿಗೂ ಸೂರ್ತಿದಾಯಕ ಸಂವಿಧಾನ ರಚಿಸಿದರು. ಆ ಮೂಲಕ ಸಮಾಜದಲ್ಲಿ ಇಂದಿಗೂ ಪ್ರಸ್ತುತೆ ಇರುವಂತೆ ಜೀವನ ನಡೆಸಿದ ಅಂಬೇಡ್ಕರ್ ಚಿಂತನೆಯಂತೆ ಈ ದೇಶ ಒಂದಾಗಿದ್ದು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
ತಹಶೀಲ್ದಾರ್ ಮಹೇಶ್ ಜೆ. ಧ್ಜಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಸಮಾನ ಶಿಕ್ಷಣ ಪಡೆಯಬೇಕೆಂದು ಆಶಿಸಿದವರು ಅಂಬೇಡ್ಕರ್. ಭಾರತೀಯರಾದ ನಾವೆಲ್ಲರೂ ಒಂದೇ ಜಾತಿ, ಒಂದೇ ಮತ ಎಂದು ಸಾಮರಸ್ಯದಿಂದ ಬದುಕಿ ಬಾಳಿ ನಾಡಿನ ಐಕ್ಯತೆ ಸಂದೇಶ ಸಾರಬೇಕಿರುವುದು ನಮ್ಮಕರ್ತವ್ಯವಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ನಾವಿದ್ದು, ಸರಕಾರದ ನಿಯಮವನ್ನು ಪಾಲಿಸಿ ಮುಂದಿನ ಪೀಳಿಗೆಗೆ ಸಂವಿಧಾನದ ಆಶಯವನ್ನು ಜೀವಂತವಾಗಿಸೋಣ ಎಂದು ಕರೆ ನೀಡಿದರು.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಮುಖ್ಯಾಧಿಕಾರಿ ಸುಧಾಕರ್, ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್, ನಿವೃತ್ತ ಸೇನಾಧಿಕಾರಿ ಎಂ.ವಿ.ಭಟ್, ಜಿ.ಪಂ. ಮಾಜಿ ಸದಸ್ಯ ಕೊರಗಪ್ಪ ನಾಯ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾ.ಪಂ. ಇ.ಒ.ಕುಸುಮಾ್ರ್ ಬಿ. ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್.ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಸರಕಾರಿ ಪ್ರೌಢ ಶಾಲೆ ಶಿಕ್ಷಕರಿಂದ ರಾಷ್ಟ್ರಗೀತೆ, ವಾಣಿ ವಿದ್ಯಾಸಂಸ್ಥೆ ಶಿಕ್ಷಕವೃಂದದಿಂದ ನಾಡಗೀತೆ, ಸೈಂಟ್ ತೆರೆಸಾ ವಿದ್ಯಾಂಸ್ಥೆ ಶಿಕ್ಷಕವೃಂದ ರೈತಗೀತೆ ಹಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.