ಬೆಳ್ತಂಗಡಿ : ಮುಂಡಾಜೆ ಗ್ರಾಮದ ಧುಂಬೆಟ್ಟು,ಮಜಲು,ಕಜೆ ಪರಿಸರದಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಪ್ರದೇಶ ಸೇರಿದಂತೆ ಚಾರ್ಮಾಡಿ, ನೆರಿಯ,ತೋಟತ್ತಾಡಿ, ಚಿಬಿದ್ರೆ,ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಹಲವಾರು ಕೃಷಿ ತೋಟಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೃಷಿ ನಾಶವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು, ಜನನಿಬಿಡ ಪ್ರದೇಶಗಳ ತನಕವು ಲಗ್ಗೆ ಇಡುತ್ತಿದ್ದು ಜನಸಾಮಾನ್ಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಮತ್ತೆ ಕಂಡುಬಂದ ಕಾಡಾನೆಗಳು
ರಬ್ಬರ್ ಟ್ಯಾಪಿಂಗ್ ಗೆ ಹೋಗುವ ಕಾರ್ಮಿಕರಿಗೆ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಾಡಾನೆಗಳು ಮತ್ತೆ ಕಂಡುಬಂದಿವೆ. ಧುಂಬೆಟ್ಟು ಪರಿಸರದಲ್ಲಿ ಕಾಡಾನೆಗಳು ತಿರುಗಾಟ ನಡೆಸಿದ್ದು ಯಾವುದೇ ಹಾನಿ ಉಂಟು ಮಾಡಿರುವ ಕುರಿತು ತಿಳಿದುಬಂದಿಲ್ಲ.
ಊರವರಿಂದ ಗಸ್ತು
ಧುಂಬೆಟ್ಟು ಪರಿಸರದಲ್ಲಿ ಕಾಡಾನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಹಲವರು ಸೇರಿ ಆನೆಗಳನ್ನು ತೋಟಗಳತ್ತ ಬರುವುದನ್ನು ತಡೆಗಟ್ಟಲು ರಾತ್ರಿ ಗಸ್ತು ಆರಂಭಿಸಿದ್ದಾರೆ. ಈ ತಂಡವು ಪಾಳಿಗಳಲ್ಲಿ ರಾತ್ರಿಯಿಂದ ಬೆಳಗಿನ ತನಕ ಕಾರ್ಯನಿರ್ವಹಿಸುತ್ತದೆ.
“ಆನೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗಿದೆ. ಆನೆ ಹಾವಳಿ ತಡೆ ಕುರಿತು ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು”