ಬೆಳ್ತಂಗಡಿ: ನಾಗರಹೊಳೆಯಿಂದ ಮುಂಡಾಜೆಯ ದುಂಬೆಟ್ಟಿಗೆ ಆಗಮಿಸಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ತಂಡ ಸೋಮವಾರ ಕಾರ್ಯಾಚರಣೆ ಆರಂಭಿಸಿದೆ.
ಉಪವಲಯ ಅರಣ್ಯಾಧಿಕಾರಿ ಯತೀಂದ್ರ,ಅರಣ್ಯ ರಕ್ಷಕ ಶರತ್ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ನಾಗರಹೊಳೆಯ ಕಾವಾಡಿಗರ ತಂಡದವರಾದ ಹರೀಶ್, ವೆಂಕಟೇಶ, ಮೋಟಪ್ಪ ಕಾರ್ಯಾಚರಣೆ ಕೈಗೊಂಡರು.
ದುಂಬೆಟ್ಟು ಪರಿಸರದ ಸಮೀಪದ ಆನೆಗಳು ನುಸುಳುವ ಜಾಗಗಳನ್ನು ಗುರುತಿಸಿ ಇಲ್ಲಿನ ಅರಣ್ಯ ಭಾಗ,ನದಿ, ಗುಡ್ಡ,ತೋಟಗಳ ಪ್ರದೇಶಗಳ ಮಾಹಿತಿ ಸಂಗ್ರಹಿಸಲಾಯಿತು. ಪ್ರದೇಶದ ಕೆಲವು ಕಡೆ ಕಾಡಾನೆಗಳು ಈ ಹಿಂದೆ ಓಡಾಟ ನಡೆಸಿದ ಜಾಡು ಪತ್ತೆ ಹಚ್ಚಲಾಯಿತು.
ಈ ಪ್ರದೇಶದಲ್ಲಿ ಒಂಟಿ ಸಲಗ ಹಾಗೂ ಮರಿಯಾನೆ ಸಹಿತ ಮೂರು ಆನೆಗಳ ಗುಂಪು ಇರುವ ಕುರಿತು ಸ್ಥಳೀಯರು,ಡಿ ಎಫ್ ಒ ಡಾ.ದಿನೇಶ್ ಕುಮಾರ್ ಅವರಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯದ ವಿವಿಧ ಭಾಗಗಳಲ್ಲಿ ಸುತ್ತಾಟ ನಡೆಸಲಾಯಿತು.ಇಲ್ಲಿ ಕಾಡಾನೆಗಳ ಗುಂಪು ಅಪರೂಪಕ್ಕೊಮ್ಮೆ ದಾಳಿ ನಡೆಸಿದರೆ ಒಂಟಿ ಸಲಗ ನಿರಂತರ ದಾಳಿ ನಡೆಸುತ್ತಿದೆ.
ನಿರಂತರ ಸುಮಾರು 18 ದಿನ ದಾಳಿ ನಡೆಸಿದ ಕಾಡಾನೆಗಳು ಶುಕ್ರವಾರದ ಬಳಿಕ ಸಂಚರಿಸಿದ ಕುರುಹುಗಳು ಕಂಡು ಬಂದಿಲ್ಲ. ಆದರೆ ಸಮೀಪದ ಚಾರ್ಮಾಡಿಯಲ್ಲಿ ಕಾಡಾನೆ ಕಂಡುಬಂದಿರುವ ಕುರಿತು ವದಂತಿ ಇದೆ. ಕಾಡಾನೆಗಳು ದುಂಬೆಟ್ಟು ಪರಿಸರದಲ್ಲಿ ಸಂಚಾರ ನಡೆಸಿದರೆ ಪರಿಣಿತರ ತಂಡಕ್ಕೆ ಕೆಲಸ ಸುಲಭವಾಗಲಿದೆ.
ಅರಣ್ಯ ಇಲಾಖೆಯ ಮುಂಡಾಜೆ ವಲಯ ಸೇರಿದಂತೆ ಸಮೀಪದ ಚಾರ್ಮಾಡಿ,ಚಿಬಿದ್ರೆ, ನೆರಿಯ,ಕಡಿರುದ್ಯಾವರ ತೋಟತ್ತಾಡಿ, ಮಿತ್ತಬಾಗಿಲು, ಮಲವಂತಿಗೆ ಮೊದಲಾದ ಪ್ರದೇಶಗಳಲ್ಲಿ ಕಾಡಾನೆಗಳು ಇರುವ ಜಾಡನ್ನು ಪತ್ತೆ ಹಚ್ಚಲು ಉಪವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.ಈ ಪ್ರದೇಶಗಳಲ್ಲೂ ಕಾಡಾನೆಗಳು ಕಂಡುಬಂದರೆ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ.
“ಮಳೆಗಾಲದ ಸಮಯದಲ್ಲಿ ಕಾಡಾನೆಗಳು ಸಂಚರಿಸುವ ಸ್ಥಳಗಳನ್ನು ಕಂಡು ಹಿಡಿಯುವುದು ಸುಲಭ. ಬೇಸಿಗೆಯಲ್ಲಿ ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಅವುಗಳ ಹೆಜ್ಜೆಗುರುತು ಮೂಡುವುದಿಲ್ಲ. ಇದರಿಂದ ಕಾರ್ಯಾಚರಣೆ ವಿಳಂಬವಾಗುವ ಸಾಧ್ಯತೆ ಇದೆ. ಇಲ್ಲಿನ ಅರಣ್ಯ ಪ್ರದೇಶ ನಾಗರಹೊಳೆ ಅರಣ್ಯಕ್ಕಿಂತ ವಿಭಿನ್ನವಾಗಿರುವ ಕಾರಣ ಕಾರ್ಯಾಚರಣೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ.” – ಹರೀಶ್, ಆನೆ ಕಾವಾಡಿಗ, ನಾಗರಹೊಳೆ