ಬೆಳ್ತಂಗಡಿ: ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರ ಚಿಂತನೆಯಂತೆ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಅವರ ಸೂಚನೆಯಂತೆ ಕಂದಾಯ ಇಲಾಖೆಯಡಿ ಬಾಕಿ ಇರುವ ಕಡತಗಳ ವಿಲೇವಾರಿ ಮಾಡಿ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯತ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ತಾಲೂಕು ಆಡಳಿತ ಸೌಧ ಕಚೇರಿಯಲ್ಲಿ ಫೆ.19 ರಿಂದ ಫೆ.28 ರವರೆಗೆ ಹಮ್ಮಿಕೊಂಡಿರುವ ಕಡತ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
94ಸಿ, 94 ಸಿಸಿಯಡಿ ಅರ್ಜಿ ಸಲ್ಲಿಸಿರುವ ಹೊಸ ಹಾಗೂ ಹಳೇ ಅರ್ಜಿ ಪರಿಶೀಲಿಸಿ ಕಡತಗಳ ವಿಲೇವಾರಿ, ಪಿಂಚಣಿ ಮೂಲಕ ನೆರವಾಗುವ, ಮಹಿಳಾ ಮತ್ತು ಮಕ್ಕಳ, ವಿಕಲಚೇತನರ ಕಾರ್ಡ್ ಸೇರಿದಂತೆ ಕಂದಾಯ ಇಲಾಖೆಯಡಿ ಕಡತ ವಿಲೇವಾರಿ ಮಾಡಿ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಮಹೇಶ್ ಜೆ., ತಾ.ಪಂ. ಇಒ ಕುಸುಮಾಧರ್, ಪ.ಪಂ. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್, ಮೆಸ್ಕಾಂ ಇಲಾಖೆ ಎಇಇ ಶಿವಶಂಕರ್, ಆರೋಗ್ಯಧಿಕಾರಿ ಡಾ.ಕಲಾಮಧು, ಸಿಡಿಪಿಒ ಪ್ರಿಯಾ ಆಗ್ನೆಸ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ತಾರಕೇಸರಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.