ಮಂಗಳೂರು : ಇಲ್ಲಿನ ಬೆಂದೂರಿನಲ್ಲಿರುವ ಬೆಥನಿ ಧಾರ್ಮಿಕ ಸಂಸ್ಥೆಯ ಶತಮಾನೋತ್ಸವ ಸಂಭ್ರಮವನ್ನು ಜುಲೈ 15ರಂದು ಪ್ರಾಂತೀಯ ಮಟ್ಟದಲ್ಲಿ ವಾಮಂಜೂರಿನ ಸಂತ ರೇಮಂಡರ ಕಾನ್ವೆಂಟಿನಲ್ಲಿ ಸಂಭರಮ ಸಡಗರದಿಂದ ಆಚರಿಸಲಾಯಿತು. ಜುಲೈ 16, 1921ರಂದು ಪ್ರಾರಂಭಗೊಂಡ ಈ ಸಂಸ್ಥೆಯು ದೇವರ ನಿರಂತರ ಆಶೀರ್ವಾದಗಳಿಂದ ಬೆಳೆದು 100 ವರ್ಷ ತುಂಬಿದ ಈ ಸಂದರ್ಭದಲ್ಲಿ ದೇವರಿಗೆ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಲಾಯಿತು. ಶ್ರಮಿಕ ಸಂತ ಜೋಸೆಫರ ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಜೇಮ್ಸ್ ಡಿ’ಸೋಜಾ ಈ ಬಲಿಪೂಜೆಯ ಮೂಲಕ ಬೆಥನಿ ಸಂಸ್ಥೆಯ ಮೇಲೆ ದೇವರ ಆಶೀರ್ವಾದ ಸಿಂಚನಗೈದರು. ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾಗಿರುವ ವಂ. ಫಾ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಬೆಥನಿಯು ಸಾಗಿ ಬಂದ ದಾರಿ, ಅನುಭವಿಸಿದ ಕಷ್ಟಗಳು, ದೇಶವಿದೇಶಗಳಲ್ಲಿ ನೀಡಿದ ಹಾಗೂ ನೀಡುವ ಸೇವೆಯನ್ನು ಉಲ್ಲೇಖಿಸುತ್ತಾ, ಸೇವಾ ಕಾಯಕದಲ್ಲಿ ಮುನ್ನಡೆಯಲು ಪ್ರಭು ಕ್ರಿಸ್ತರು ಶಕ್ತಿಯನ್ನು ಕರುಣಿಸಲಿ ಎಂಬ ಸಂದೇಶದೊಂದಿಗೆ ಪ್ರವಚನ ನೀಡಿದರು. ವಂ. ಸಂತೋಷ್ ಡಿ ಸೋಜಾ, ವಂ. ಆಲ್ವಿನ್ ಡಿಸೋಜಾ ಬಲಿಪೂಜೆಯಲ್ಲಿ ಭಾಗವಹಿಸಿದರು. ಬಲಿಪೂಜೆಯ ಪೂರ್ವದಲ್ಲಿ ಬೆಥನಿಯ ಧ್ಯೇಯ ಗೀತೆಯೊಂದಿಗೆ 100 ಪ್ರಜ್ವಲಿತ ದೀಪಗಳೊಂದಿಗೆ ಭಗಿನಿಯರು ಮೆರವಣಿಗೆಯಲ್ಲಿ ಬಂದು ಆ ದೀಪಗಳನ್ನು ಪ್ರಭು ಯೇಸುವಿನ ಚರಣಗಳಿಗೆ ಅರ್ಪಿಸಿದರು.
ತರುವಾಯ ಅಭಿನಂದನಾ ಕಾರ್ಯಕ್ರಮವು ಸಭಾಭವನದಲ್ಲಿ ಜರಗಿತು. ಪ್ರಾಂತ್ಯಾಧಿಕಾರಿಣಿ ಭಗಿನಿ ಸಿಸಿಲಿಯಾ ಮೆಂಡೊನ್ಸಾ, ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಗ್ರೇಸಿ ಮೊನಿಕಾ ಹಾಗೂ ಸಲಹಾದಾರರು ಜೊತೆಗೂಡಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಶತಕ ಸಂಭ್ರಮದ ಅಭಿನಂದನಾ ಗೀತೆಯನ್ನು ಹಾಡಲಾಯಿತು. ವಂದನೀಯ ಫಾ| ಆಲ್ವಿನ್ ಡಿಸೋಜಾ ತಮ್ಮ ಅಭಿನಂದನಾ ನುಡಿಯಲ್ಲಿ ಬೆಥನಿ ಭಗಿನಿಯರು ಧರ್ಮಕೇಂದ್ರಕ್ಕೆ, ಧರ್ಮಸಭೆಗೆ ಹಾಗೂ ಮಾನವಸಮಾಜಕ್ಕೆ ನೀಡಿದ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಭಗಿನಿ ಸಿಸಿಲಿಯಾ ಮೆಂಡೊನ್ಸಾರವರು ಬೆಥನಿ ಸಂಸ್ಥಾಪಕ ದೇವರ ಸೇವಕ ರೇಮಂಡ್ ಮಸ್ಕರೆನ್ಹಾಸ್ ಹಾಗೂ ಸ್ಥಾಪಕ ಭಗಿನಿಯರನ್ನು ಧನ್ಯತೆಯಿಂದ ಸ್ಮರಿಸುತ್ತಾ ತಮ್ಮ ಸಂದೇಶವನ್ನು ನೀಡಿ ಬೆಥನಿಯು ಇನ್ನು ಮುಂದಕ್ಕೂ ಬೆಳೆಯಲಿ, ಅರಳಲಿ, ಫಲನೀಡಲಿ ಎಂದು ಆಶಿಸುತ್ತಾ ಬೆಥನಿಯ ಕನಸು ಸಾಕಾರಗೊಳಿಸುವಲ್ಲಿ ಸಹಕರಿಸುವ ಎಲ್ಲಾ ಭಗಿನಿಯರಿಗೆ ಕೃತಜ್ಞತೆ ಸಲ್ಲಿಸಿದರು. ಭಗಿನಿ ಗ್ರೇಸಿ ಮೊನಿಕಾ ಸ್ವಾಗತಿಸಿ, ಭಗಿನಿ ಆನ್ನಾಮರಿಯಾ ವಂದಿಸಿದರು, ಭಗಿನಿ ಲಿಲ್ಲಿ ಪಿರೇರಾ ನಿರ್ವಹಿಸಿದರು.