ಬಂಟ್ವಾಳ: ತಾಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟ ವರ ಕುಟುಂಬಗಳಿಗೆ ಸರಕಾರದಿಂದ ಮಂಜೂರಾದ ಪರಿಹಾರ ಧನದ ಚೆಕ್ ನ್ನು ಶಾಸಕ ರಾಜೇಶ್ ನಾಯ್ಕ್ ಶುಕ್ರವಾರ ವಿತರಿಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ಪರಿಹಾರ ಧನ ಸರಕಾರದಿಂದ ನೀಡಲಾಗುವ ಸಣ್ಣ ಮಟ್ಟಿನ ನೆರವಾಗಿದ್ದು, ಕಳೆದುಕೊಂಡ ಜೀವಗಳಿಗೆ ಬೆಲೆಕಟ್ಟಲು ಅಸಾಧ್ಯ ಎಂದು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಕೋವಿಡ್ ಅನ್ನು ನಮ್ಮ ಭಾರತ ಅತ್ಯಂತ ಸಮರ್ಥವಾಗಿ ಎದುರಿಸಿದ್ದು, ಭಾರತದ ಕ್ರಿಯಾಶೀಲತೆಗೆ ಇಡೀ ಜಗತ್ತೇ ಬೆರಗಾಗಿದೆ. ಇದಕ್ಕೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವೇ ಕಾರಣ ಎಂದ ಅವರು, 135 ಕೋಟಿ ಜನಸಂಖ್ಯೆಯ ಭಾರತದಲ್ಲಿ ಲಸಿಕೆ ನೀಡಿಕೆ ಸುಲಭವಲ್ಲ. ಅದನ್ನೂ ಜಾಣ್ಮೆಯ ಕಾರ್ಯತಂತ್ರದ ಮೂಲಕ ವಿತರಿಸಲಾಗಿದೆ. ಹೀಗಾಗಿ ಜಗತ್ತೇ ಭಾರತವನ್ನು ಬೆರಗುಕಣ್ಣುಗಳಿಂದ ನೋಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಅಚಾರ್ಯ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ ಆರ್. ಪೂಜಾರಿ, ಕಾವಳಮೂಡೂರು ಗ್ರಾ.ಪಂ. ಉಪಾಧ್ಯಕ್ಷ ಅಜಿತ್ ಶೆಟ್ಟಿ,
ಉಪತಹಶೀಲ್ದಾರ್ ನರೇಂದ್ರನಾಥ ಭಟ್ ಮಿತ್ತೂರು, ಕಂದಾಯ ನಿರೀಕ್ಷಕರಾದ ಕುಮಾರ್ ಟಿ.ಸಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.