ಬಂಟ್ವಾಳ: ಇಬ್ಬರು ಪತ್ರಕರ್ತರಿಂದ ಆರಂಭಗೊಂಡ ಮನೆ ನಿರ್ಮಾಣ ಕಾರ್ಯ, ದಾನಿಗಳ ನೆರವು, ಸಂಘಟನೆಗಳ ಸಹಕಾರದಿಂದಾಗಿ ಇಂದು ಸಂಪೂರ್ಣಗೊಂಡು ಕುಸಿಯುವ ಹಂತದ ಮನೆಯಲ್ಲಿ ವಾಸಿಸುತ್ತಿದ್ದ ಬಡಕುಟುಂಬಕ್ಕೆ ಆಸರೆ ನೀಡಿದೆ. ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯ ನಾಗಮಜ್ಜಿಯ ಮನೆ ನಿರ್ಮಾಣದ ಕನಸು ಇದೀಗ ಸಾಕರಗೊಂಡು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪತ್ರಕರ್ತರು ವರದಿಗಾರಿಕೆಗೆ ಮಾತ್ರವಲ್ಲದೆ ಸಮಾಜದಲ್ಲಿ ನೊಂದವರ ನೋವಿಗೂ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ.
ನಾಗಮಜ್ಜಿಗೆ ಮನೆ ಕಟ್ಟೋಣ ಅಭಿಯಾನ:
ಯಾವುದೇ ಆರ್ಥಿಕ ಬಂಡವಾಳವಿಲ್ಲದೆ ಶೂನ್ಯ ಮೊತ್ತದಿಂದ ಆರಂಭಗೊಂಡ ಮನೆ ನಿರ್ಮಾಣ ಕಾರ್ಯಕ್ಕೆ ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ಹಾಗೂ ಮೋಹನ್ ದಾಸ್ ಮರಕಡ ಚಾಲನೆ ನೀಡಿದ್ದರು. ಅಭಿಯಾನದ ಅಂಗವಾಗಿ ಮನೆಗೊಂದು ಕಲ್ಲು ನೀಡೋಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಯಿತು. ಅಪಾರ ಸ್ಪಂದನೆ ಸಿಕ್ಕಿ ಮನೆಗೆ ಬೇಕಾಗುವ ಕಲ್ಲು ಸಂಗ್ರಹವಾಯಿತು. ಇದೇ ಸಂದರ್ಭ ಜೆಸಿಐ ಬಂಟ್ವಾಳ ಸಂಸ್ಥೆ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿ ಸದಸ್ಯರ ಸಹಕಾರದಿಂದ ಸಿಮೆಂಟ್ ಸಂಗ್ರಹಣೆಯೂ ಸಾಧ್ಯವಾಯಿತು. ದಾನಿಗಳು ಮರಳು, ಸಿಮೆಂಟ್ ಖರೀದಿಗೆ ನೆರವು ಆರ್ಥಿಕ ನೆರವು ನೀಡಿದರು. ವಿವಿಧ ಸಂಘಟನೆಗಳ ಸಹಕಾರದಿಂದ ಶ್ರಮದಾನದ ಕೆಲಸವೂ ನಡೆಯಿತು.
ಈ ವೇಳೆ ಅಶ್ವಿನ್ ಮುಂಡಾಜೆ ಎನ್ನುವ ಸ್ಥಳೀಯ ಯುವ ಗುತ್ತಿಗೆದಾರರು ಮನೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದ ಹಿನ್ನಲೆಯಲ್ಲಿ ಕೇವಲ 6 ತಿಂಗಳಿನಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಪಂಚಾಂಗ ಹಾಗೂ ಗೋಡೆ ಕೆಲಸವನ್ನು ಅಶ್ವಿನ್ ಅವರು ತಮ್ಮ ಕಾರ್ಮಿಕರ ಮೂಲಕ ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಉಳಿದ ಕೆಲಸವನ್ನು ರಿಯಾಯಿತಿ ದರದಲ್ಲಿ ನಿರ್ವಹಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಕಾರವೂ ಮನೆ ನಿರ್ಮಾಣ ಕಾರ್ಯಕ್ಕೆ ಸಿಕ್ಕಿದೆ. ಸ್ವತಃ ಮನೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಯೋಜನೆಯ ಅಧಿಕಾರಿಗಳು ತ್ವರಿತವಾಗಿ ಆರ್ಥಿಕ ನೆರವು ಹಸ್ತಾಂತರಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗೆಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಬಿ.ರಮನಾಥ ರೈ ಯವರು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಸಿಮೆಂಟ್ ಹಾಗೂ ಆರ್ಥಿಕ ನೆರವನ್ನು ನೀಡಿದ್ದಾರೆ. ಇದೇ ರೀತಿ ಹಲವಾರು ದಾನಿಗಳು, ಸಂಘ ಸಂಸ್ಥೆಗಳು ಕೊಡುಗೆಗಳನ್ನು ನೀಡಿದೆ.
ಡಿ.26ಕ್ಕೆ ಗೃಹಪ್ರವೇಶ:
ಡಿ.26 ರಂದು ಭಾನುವಾರ ಬೆಳಿಗ್ಗೆ 8.05 ರ ಶುಭ ಮುಹೂರ್ತದಲ್ಲಿ ಗೃಹಪ್ರವೇಶ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಕೃತಜ್ಞತಾ ಸಭೆ ನಡೆಯಲಿದೆ. ಗಣ್ಯರು ಸಹಿತ ದಾನಿಗಳು ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಳೆದ ಜೂ.11ಕ್ಕೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು ಕೇವಲ 6 ತಿಂಗಳಿನಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ