ಬಂಟ್ವಾಳ: ಜಿಲ್ಲಾಡಳಿತದ ಅಂಕಿ-ಅಂಶದನ್ವಯ ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಮುಂದಿನ 10 ರಿಂದ15 ವರ್ಷದಲ್ಲಿ ಇನ್ನಷ್ಟು ನಶಿಸಿ ಹೋಗುವ ಸಾಧ್ಯತೆಯ ಕುರಿತಂತೆ ಕಳವಳ ವ್ಯಕ್ತಪಡಿಸಿದ ಕೊರಗ ಸುಮುದಾಯದ ಮುಖಂಡರು ಯಾವುದೇ ಕಾರಣಕ್ಕೂ ಇನ್ನೊಂದು ವರ್ಗದ ಜೊತೆ ಸೇರಿಸಿಕೊಳ್ಳದೆ ಪ್ರತ್ಯೇಕವಾಗಿ ಸರಕಾರದ ಯೋಜನೆ ಸವಲತ್ತು ಸಿಗುವಂತಾಗಬೇಕು, ಈ ಮೂಲಕ ನಮಗೂ ಶಾಶ್ವತ ಬದುಕು ಕಟ್ಟಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿ ಎಸ್ ಆರ್ ವೈ ಸಭಾಂಗಣದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕುಮಟ್ಟದ ಕೊರಗ ಸಮುದಾಯದ ಕುಂದು ಕೊರತೆಗಳ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಕೊರಗ ಸಮುದಾಯದ ಮುಖಂಡ ಸುಂದರ ಬೆಳುವಾಯಿ ಅವರು ಬಂಟ್ವಾಳ ತಾಲೂಕಿನಲ್ಲಿ ಕೇವಲ 572 ಮಂದಿಯಷ್ಟೆ ಜನಸಂಖ್ಯೆ ಇದ್ದು, ನಮ್ಮ ಸಮುದಾಯದ ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾದ ಡಾ.ಮಹಮ್ಮದ್ ಫಿರ್ ವರದಿ ಇನ್ನು ಸಮಗ್ರವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಭೆಯ ಗಮನಸೆಳೆದರು. ಮುಖಂಡ ಸಂಜೀವ ಅವರು ಇದಕ್ಕೆ ಧ್ವನಿಗೂಡಿಸಿದರು.
ನಮ್ಮ ಹಿರಿಯರ ಕಾಲದಿಂದಲು ನಮ್ಮಲ್ಲಿ ಯಾವುದೇ ಮೂಲಭೂತವಾದ ದಾಖಲೆಗಳಿಲ್ಲ, 30 ವರ್ಷದಿಂದೀಚೆಗೆ ನಮ್ಮ ಯುವ ಪೀಳಿಗೆ ಶಿಕ್ಷಣದತ್ತ ಮುಖಮಾಡುತ್ತಿದೆ.ಅಧಿಕಾರಿಗಳು ಇಂತಹ ಸಭೆ ನಡೆಸಿ ಸಮಸ್ಯೆಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ಮುಂದಾದಾಗ ಆ ಅಧಿಕಾರಿ ವರ್ಗಾವಣೆಯಾಗಿ ತೆರಳುತ್ತಾರೆ.ಮತ್ತೆ ನಮ್ಮ ಸಮಸ್ಯೆಗಳು ಹಾಗೆ ಉಳಿಯುತ್ತದೆ.ಹೊಸ ಅಧಿಕಾರಿಗಳು ಬಂದಾಗ ಪುನರಪಿ ಅವರಿಗೆ ಸಮಸ್ಯೆ ವಿವರಿಸಬೇಕಾಗುತ್ತದೆ.ಹಾಗಾಗಿ ನಮ್ಮ ಸಮಸ್ಯೆಗಳು ಕೇವಲ ಚರ್ಚೆಗೆ ಸೀಮಿತವಾಗಿ ಪರಿಹಾರ ಕಾಣದೆ ವರ್ಷಾನುಗಟ್ಟಲೆಯಿಂದ ಹಾಗೆ ಉಳಿದಿದೆ ಎಂದು ಸುಂದರ ಬೆಳುವಾಯಿ ಸಭೆಗೆ ತಿಳಿಸಿದರು.
ನಮ್ಮ ಸಮಸ್ಯೆ ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾಮಮಟ್ಟದಲ್ಲೇ ಮಾಸಿಕವಾಗಿ ಗುಂಪುಸಭೆ ನಡೆಸಿದರೆ ಸ್ಥಳೀಯವಾಗಿ ಸಮಸ್ಯೆ ಪರಿಹಾರ ಕಾಣಲು ಸಾಧ್ಯ ಎಂದು ಅವರು ಸಲಹೆ ನೀಡಿದರು.
ಕೊರಗ ಸಮುದಾಯ ಜನರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದ ಬಳಿ ಜಮೀನು ಗುರುತಿಸಲಾಗಿತ್ತಲ್ಲದೆ ಇದಕ್ಕೆ ಮಂಜೂರಾದ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಲಾಗಿತ್ತು.
ಕೊರಗರ ಸಮಸ್ಯೆ ಗಳ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಇಂತಹ ಸಭೆಯಲ್ಲಿ ಚರ್ಚೆ ಮಾಡುತ್ತಲೇ ಬಂದಿದ್ದೇವೆ,ಕೆಲವು ಸಮಸ್ಯೆಗಳ ಬಗ್ಗೆ ಲಿಖಿತ ಅರ್ಜಿಯನ್ನು ಕೊಟ್ಟಿದ್ದೆವೆ ಆದರೆ ಯಾವುದೇ ಪ್ರಯೋಜನ ವಾಗಿಲ್ಲ . ಈ ಸಭೆ ಕೇವಲ ಕಾಟಾಚಾರಕ್ಕೆ ನಡೆಸದೆ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು ಎಂದು ಬಾಬು ಬಾಳೆಪುಣಿ ತಿಳಿಸಿದರು.