ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಸುರತ್ಕಲ್ ಸಹಯೋಗದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ರಜತ ಮಹೋತ್ಸವ ಉದ್ಘಾಟನೆ ಹಾಗೂ ಯಕ್ಷಬ್ರಹ್ಮ ಗ್ರಂಥ ಲೋಕಾರ್ಪಣೆ ಮತ್ತು ಯಕ್ಷಬ್ರಹ್ಮ ಅಗರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 12ರಂದು ಅಪರಾಹ್ನ ನಡೆಯಲಿದೆ.
ಕುರಿಯ ಪ್ರತಿಷ್ಠಾನದ ರಜತ ಮಹೋತ್ಸವದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲಿನ ವೇ. ಮೂ. ಶ್ರೀ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರು ಮತ್ತು ಯಕ್ಷಬ್ರಹ್ಮ ಗ್ರಂಥ ಲೋಕಾರ್ಪಣೆಯನ್ನು ಹಿರಿಯ ರಂಗಭೂಮಿ ಚಿಂತಕ ಡಾ. ಕೆ. ಚಿನ್ನಪ್ಪ ಗೌಡರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ| ವೈ. ಭರತ್ ಶೆಟ್ಟಿ ವಹಿಸಿ, ಅಗರಿ ಸಂಸ್ಮರಣೆಯನ್ನು ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಮಂಗಳೂರು ನಡೆಸಲಿದ್ದಾರೆ. ಅಭ್ಯಾಗತರಾಗಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕುರಿಯ ಪ್ರತಿಷ್ಠಾನದ ವತಿಯಿಂದ ಪ್ರಸಂಗಕರ್ತರ ಗೌರವವನ್ನು ಪ್ರಸಂಗಕರ್ತ ಶ್ರೀ ಗಣೇಶ ಕೊಲೆಕಾಡಿ, ಅಗರಿ ಪ್ರಶಸ್ತಿ 2020ನ್ನು ಯಕ್ಷಗಾನ ವಿದ್ವಾಂಸ ಡಾ| ಕೆ.ಎಂ. ರಾಘವ ನಂಬಿಯಾರ್, ಅಗರಿ ಪ್ರಶಸ್ತಿ 2021ನ್ನು ಕಲಾಸಂಘಟಕ ಎನ್. ಅಶೋಕ ಭಟ್ ಉಜಿರೆ, ಅಗರಿ ಶೈಲಿ ಪ್ರೋತ್ಸಾಹ ಪ್ರಶಸ್ತಿಯನ್ನು ಭಾಗವತರಾದ ರಮೇಶ್ ಭಟ್ ಪುತ್ತೂರು, ಪರಮೇಶ್ವರ ಐತಾಳ್ ಪಣಂಬೂರು ಅವರಿಗೆ ಪ್ರದಾನ ಮಾಡಲಾಗುವುದು. ಅಪರಾಹ್ನ ಅಗರಿ ಶ್ರೀನಿವಾಸ ಭಾಗವತ ವಿರಚಿತ ಬ್ರಹ್ಮಕಪಾಲ ತಾಳಮದ್ದಳೆ ಹಾಗೂ ‘ವೀರವೃಷಸೇನ’ ಬಯಲಾಟ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಸುರತ್ಕಲ್ನ ಜಂಟಿ ಪ್ರಕಟಣೆ ತಿಳಿಸಿದೆ.