ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಷ್ಟದಲ್ಲಿರುವ ಜನರನ್ನು ಗುರುತಿಸಿ ಜನರ ಕಣ್ಣೀರೊರೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಒಕ್ಕೂಟದ ಕೆಲಸ ಕಾರ್ಯಗಳನ್ನು ನೋಡಿದ್ದೇನೆ, ಮೆಚ್ಚಿದ್ದೇನೆ. ಸಮಾಜದ ಜನತೆಯ ಸೇವಾ ಕೈಂಕರ್ಯದಲ್ಲಿ ನನಗೆ ತೃಪ್ತಿ ಇದೆ. ಹೀಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪ್ರತೀ ವರ್ಷ ತನ್ನ ಸಂಸ್ಥೆಯಿಂದ 50 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಮುಂಬಯಿ ಹೇರಂಬ ಇಂಡಸ್ಟ್ರೀಸ್ನ ಅಧ್ಯಕ್ಷ, ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ತಿಳಿಸಿದರು.
ಬಂಟ್ಸ್ ಹಾಸ್ಟೇಲ್ನ ಅಮೃತಮಹೋತ್ಸವ ಕಟ್ಟಡದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಸ್ವಂತ ನೆಲೆ ಬೇಕು. ಹೀಗಾಗಿ ಜಾಗ ಖರೀದಿಸಿ ಕಟ್ಟಡ ನಿರ್ಮಿಸಬೇಕಾಗಿದೆ. ಆ ಮೂಲಕ ಜಾಗತಕ ಬಂಟರ ಸಂಘಗಳ ಒಕ್ಕೂಟವು ದಾನಿಗಳ ನೆರವಿನ ಜತೆಗೆ ಆದಾಯದ ಕಡೆಗೆ ಹೆಚ್ಚು ಗಮನಹರಿಸ ಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಸಮಾಜದ ವ್ಯಕ್ತಿಯಾಗಿ, ಶಕ್ತಿಯಾಗಿ ಕೆಲಸ ಮಾಡಲು ಎಲ್ಲರ ಸಹಕಾರಬೇಕು. ಸಮಾಜದಲ್ಲಿರುವ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕಷ್ಟದಲ್ಲಿರುವ ಜನರಿಗೆ ನೀಡಲಾಗುತ್ತಿದೆ. ಈಗಾಗಲೇ ಏಳರಿಂದ ಎಂಟು ಕೋಟಿ ರೂ. ಹಣವನ್ನು ಸಮಾಜದ ಮತ್ತು ಇತರ ಸಮಾಜದ ಜನರಿಗೂ ನೀಡಲಾಗಿದೆ. ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ ಎಂದರು. ಸಮಾಜದಲ್ಲಿರುವ ಸಂಘಗಳು ಕೇವಲ ಮಹಾಸಭೆಗೆ ಮಾತ್ರ ಸೀಮಿತವಾಗದೆ ಕಾರ್ಯಚಟುವಟಿಕೆಗಳ ಮೂಲಕ ಸಮಾಜದ ಏಳಿಗೆಗೆ ದುಡಿಯುವಂತಾಗಬೇಕು. ಬಂಟರ ಸಂಘಗಳು ಒಕ್ಕೂಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರೆ ಒಕ್ಕೂಟ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ ಸಮಾಜದ ಬಂಧುಗಳ ಸಹಕಾರದಿಂದ ನೈಜ ಫಲಾನುಭವಿಗಳಿಗೆ ಒಕ್ಕೂಟದಿಂದ ಪರಿಹಾರ ಧನ ವಿತರಣೆಯಾಗುತ್ತಿದೆ. ಯೋಜನೆಗಳು ಯಶಸ್ವಿಯಾಗಿ ತಳಮಟ್ಟದ ಕಟ್ಟ ಕಡೆಯ ವ್ಯಕ್ತಿಗಳಿಗೂ ತಲುಪುತ್ತಿದೆ. ಎಷ್ಟೋ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮ ನಡೆಸಿದರೂ ಅದು ಪೂರ್ಣ ಪ್ರಮಾಣದಲ್ಲಿ ತಲುಪುತಿಲ್ಲ. ಆದರೆ ಒಕ್ಕೂಟದ ಕೆಲಸ ಶ್ಲಾಘನೀಯ, ಪ್ರಶಂಸನೀಯ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ನಮ್ಮ ಹೆಸರನ್ನು ಶಾಶ್ವತವಾಗಿ ಇಡಬೇಕಾದರೆ ನಾವು ಇತರರಿಗಾಗಿ, ಸಮಾಜಕ್ಕಾಗಿ ಬದುಕಬೇಕು. ಬಂಟರು ನಾಯಕತ್ವದ ಗುಣವನ್ನು ಉಳಿಸಿ ಬೆಳೆಸಿಕೊಂಡವರು. ಬಂಟರ ಸಮಾಜ ಇತರ ಸಮಾಜದವರನ್ನು ಗುರುತಿಸಿ ಪ್ರೋತ್ಸಾಹಿಸಿದವರು ಎಂದು ತಿಳಿಸಿದರು.
ಸಮಾಜದಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವುದು ಉತ್ತಮ ಕೆಲಸ ಎಂದು ಕಾಂಗ್ರೆಸ್ ಮುಂಖಡ ಮಿಥುನ್ ರೈ ತಿಳಿಸಿದರು. ಸಮಾರಂಭದಲ್ಲಿ ಪತ್ರಕರ್ತರಾದ ಭಾಸ್ಕರ್ ರೈ ಕಟ್ಟ, ಶರತ್ ಶೆಟ್ಟಿ ಕಿನ್ನಿಗೋಳಿ, ನವೀನ್ ಶೆಟ್ಟಿ ಎಡ್ಮೆಮಾರ್, ನಯನಾ ಶೆಟ್ಟಿ , ಲೀಲಾಕ್ಷ ಕರ್ಕೇರಾ, ಸ್ಫೂರ್ತಿ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಒಕ್ಕೂಟದ ಪೋಷಕ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲು, ಒಕ್ಕೂಟದ ಪೋಷಕರಾದ ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು, ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವನೆಗೈದರು. ಸತೀಶ್ ಅಡಪ ಸಂಕಬೈಲು ವಂದಿಸಿದರು. ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥನೆಗೈದರು. ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿ ಒಟ್ಟು 68 ಮಂದಿಗೆ 11 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಿತರಿಸಿದರು. ವೈದ್ಯಕೀಯ, ಮದುವೆ, ಶಿಕ್ಷಣ, ದತ್ತು ಸ್ವೀಕಾರ, ಮನೆರಿಪೇರಿ ಮತ್ತು ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಚೆಕ್ನ್ನು ನೀಡಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜದ ಕಾರ್ಯ ತೃಪ್ತಿ ತಂದಿದೆ :ಉದ್ಯಮಿ ಸದಾಶಿವ ಶೆಟ್ಟಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.