ಶಿವಮೊಗ್ಗ, ಡಿ. 23 : ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿ ಇಂದು ಟೀ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಲಾಗಿದೆ. ತಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 6 ದಿನಗಳಿಂದ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಟೀ ಮಾರಾಟ ಮಾಡಿ ಗಮನಸೆಳೆದರು. ರಾಜ್ಯದ 430 ಪ್ರಥಮದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲವಾಗಿದೆ. ಸರ್ಕಾರದ ಸೌಲಭ್ಯಗಳ್ಯಾವು ಅವರಿಗೆ ಸಿಗುತ್ತಿಲ್ಲ. ಅತಿಥಿ ಉಪನ್ಯಾಸಕರ ಸೇವೆಯನ್ನು ನಿಯಮ 14 ರ ಅಡಿಯಲ್ಲಿ ವಿಲೀನಗೊಳಿಸಬೇಕು. ಅವರನ್ನು ಕಾಯಂಗೊಳಿಸಬೇಕು.
ಕಾಯಂಗೊಳಿಸುವವರೆಗೂ ಅಂದರೆ ಸೇವಾ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವವರೆಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಅತಿಥಿ ಉಪನ್ಯಾಸಕರು ಹೀಗೆ ಮಜ್ಜಿಗೆ, ಟೀ, ಮಾಡಿ ಜೀವನ ಸಾಗಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಹೆಚ್. ಸೋಮಶೇಖರ್ ಶಿಮೊಗ್ಗಿ, ಚಂದ್ರಪ್ಪ, ಸತೀಶ್ ಕುಮಾರ್, ಧನಂಜಯ ಸ್ವಾಮಿ, ರೂಪಾ, ಡಾ. ಅನ್ನಪೂರ್ಣ, ದೀಪಾ, ಕೋಮಲಾ, ಡಾ. ಶೀಲಾ, ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ, ಸತೀಶ್, ಖಜಾಂಚಿ ರಾಜೇಶ್ ಕುಮಾರ್ ಮೊದಲಾದವದ್ದರು.