ಬೆಳ್ತಂಗಡಿ: ಗುರುವಾಯನಕೆರೆ ವ್ಯಾಪ್ತಿಯಲ್ಲಿ 220 ಕೆ.ವಿ. ಹಾಗೂ ಕುತ್ಲೂರು ವ್ಯಾಪ್ತಿಯಲ್ಲಿ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಬ್ಸ್ಟೇಶನ್ಗೆ ಶೀಘ್ರದಲ್ಲೇ ಮಂಜೂರಾತಿ ನೀಡಲಾಗುವುದು ಮತ್ತು ಎಳನೀರಿನ ವಿದ್ಯುತ್ ವಂಚಿತ 30 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಪ್ರಕಟಿಸಿದರು.
ಅವರು ಶನಿವಾರ ಬೆಳ್ತಂಗಡಿ ತಾಲೂಕಿನಲ್ಲಿ ರೂ. 33.72 ವೆಚ್ಚದಲ್ಲಿ ಅಳವಡಿಸಲಾಗುವ 538 ವಿದ್ಯುತ್ಪರಿವರ್ತಕಗಳಿಗೆ ಶಿಲಾನ್ಯಾಸ ನೆರವೇರಿಸಿ, ಕಿನ್ಯಮ್ಮ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಇಷ್ಟು ದೊಡ್ಡಪ್ರಮಾಣದಲ್ಲಿ ಟಿ.ಸಿ.ಗಳ ಅಳವಡಿಕೆ ಮಾಡಲಾಗುತ್ತಿರುವುದು ಇದೇ ಮೊದಲಬಾರಿಗೆ ಆಗಿದೆ. ರೈತರ ಕಷ್ಟಗಳನ್ನು ನೀಗುವ ಪ್ರಾಮಾಣಿಕ ಕಳಕಳಿಯ ಶಾಸಕ ಹರೀಶ್ ಪೂಂಜ ಆಗಿದ್ದಾರೆ. ಎಲ್ಲಾ ಇಲಾಖೆಯಿಂದ ಕಾರ್ಕಳ ಕ್ಕಿಂತಲೂ ಮಿಗಿಲಾಗಿ ಅನುದಾನ ತಂದಿದ್ದಾರೆ ಇಲ್ಲಿನ ಶಾಸಕರು.
ಕ್ಷೇತ್ರದ ಜನಪ್ರತಿನಿಧಿಗೆ ಯಾವ ರೀತಿಯ ಅಭಿವೃದ್ಧಿಯ ಕಲ್ಪನೆ ಇರಬೇಕು ಎಂಬುದನ್ನು ಇಲ್ಲಿ ನೋಡಬೇಕು. ಹಿಂದಿನ ಅವಧಿಗಳಲ್ಲಿ ಇಲ್ಲಿ ಯಾಕೆ ಅಭಿವೃದ್ಧಿ ಆಗಿಲ್ಲಾ ಎಂಬುದನ್ನು ಜನತೆ ಈಗ ಅರಿತುಕೊಂಡಿದ್ದಾರೆ ಎಂದ ಅವರು ಮುಂದಿನ 10 ವರ್ಷಗಳ ಗುರಿಯಲ್ಲಿ ವಿದ್ಯುತ್ ಇಲಾಖೆಯನ್ನು ಘನಿಷ್ಠತೆಯ ಇಲಾಖೆಯನ್ನಾಗಿ ಮಾಡಲು ಪೂರ್ಣ ಪ್ರಮಾಣದ ಶ್ರಮ ವಹಿಸಲಾಗುವುದು ಎಂದರು.
ನಳೀನ್ ಕುಮಾರ್ ಕಟೀಲು ಅವರು, ಕಳೆದ ನಾಲ್ಕು ವರ್ಷಗಳಲ್ಲಿ 1200 ಕೋಟಿ ರೂ.ಗೂ ಅಧಿಕ ಅನುದಾನ ತಂದು ಬೆಳ್ತಂಗಡಿಯನ್ನು ಪರಿವರ್ತನೆಯ ಹಾದಿಯಲ್ಲಿಕೊಂಡು ಹೋಗಿದ್ದಾರೆ. ಶಾಸಕ ಪೂಂಜ ಅವರು ಭೂತಕಾಲದ ಕತ್ತಲಿನ ಬಗ್ಗೆ ಚರ್ಚಿಸದೆ ಭವಿಷ್ಯದ ಕತ್ತಲನ್ನು ಹೊಡೆದೋಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪ್ರಸ್ತಾವಿಸಿದ ಶಾಸಕ ಹರೀಶ್ ಪೂಂಜ ಅವರು ಸಚಿವರಲ್ಲಿ, ಬೆಳ್ತಂಗಡಿ, ಪುತ್ತೂರು, ಸುಳ್ಯ,ಬಂಟ್ವಾಳಕ್ಕೆ ಅನುಕೂಲವಾಗುವಂತೆ ಕಳಿಯದಲ್ಲಿ 220 ಕೆ.ವಿ. ಕುತ್ಲೂರು, ಬೆಳಾಲು, ಕಕ್ಕಿಂಜೆ, ಕಕ್ಕಿಂಜೆಗಳಲ್ಲಿ 110 ಕೆ.ವಿ., ಅರಸಿನಮಕ್ಕಿ, ಉಜಿರೆಯಲ್ಲಿ 33 ಕೆ.ವಿ. ಸಬ್ಸ್ಟೇಶನ್ಗಳಿಗೆ, ತಾಲೂಕಿನಾದ್ಯಂತ ಹಳೇ ತಂತಿಗಳ ಬದಲಾವಣೆಗೆ, ಮೆಸ್ಕಾಂನಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಹಾಗೂ ಇನ್ನೂ 500 ಟಿ.ಸಿ.ಗಳಿಗೆ ಬೇಡಿಕೆಯನ್ನಿಟ್ಟರಲ್ಲದೆ, ಸಚಿವರು ಅಕ್ಷಯ ಪಾತ್ರೆಯಂತಿದ್ದಾರೆ. ಹೀಗಾಗಿ ನಮ್ಮ ಜನಪರ ಬೇಡಿಕೆಗಳಿಗೆ ಮನ್ನಣೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಆರ್.ಡಿ.ಎಸ್.ಎಸ್.ಯೋಜನೆಯಡಿ ದ.ಕ.ಜಿಲ್ಲೆಗೆ 400 ಕೋಟಿ ರೂ. ಮೀಸಲಿಟ್ಟಿದೆ. ಅದರಲ್ಲಿ 39 ಕೋಟಿ ರೂ. ಬೆಳ್ತಂಗಡಿ ತಾಲೂಕಿಗೆ ಸಿಗಲಿದೆ. ಇಂಧನ ಇಲಾಖೆಯು ರೈತರ, ಗ್ರಾಹಕರ, ಉದ್ಯೋಗಗಳಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಲಿದೆ. ಪವನ ಶಕ್ತಿ ಹಾಗೂ ಸೌರ ಶಕ್ತಿಯ ಪಾರ್ಕ್ ನಿರ್ಮಿಸುವ ಗುರಿ ಹೊಂದಲಾಗಿದೆ. ಟಿ.ಸಿ.ಸುಟ್ಟು ಹೋದಲ್ಲಿ ಅದನ್ನು 24 ಗಂಟೆಯೊಳಗೆ ಬದಲಾಯಿಸುವ ಕ್ರಮಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರಕಿದೆ. ಬೆಳಕು ಯೋಜನೆಯಡಿ ಇನ್ನು ಮುಂದೆ ಗ್ರಾ.ಪಂ.ನಿಂದ ಎನ್.ಒ.ಸಿ. ಅಗತ್ಯವಿಲ್ಲ. – ಸುನೀಲ್ ಕುಮಾರ್
ತಾಲೂಕಿನಾದ್ಯಂತ ಉತ್ತಮ ಹಾಗೂ ಗುಣಮಟ್ಟದ ಅನಿರ್ಬಂಧಿತ ವಿದ್ಯುತ್ ಸರಬರಾಜು ಆಗಬೇಕು ಎಂಬ ಉದ್ದೇಶದಿಂದ, ಶನಿವಾರ ರೂ. 16.19 ಕೋಟಿ ವೆಚ್ಚದಲ್ಲಿ ಮೆಸ್ಕಾಂನ ಬೆಳ್ತಂಗಡಿ ಉಪವಿಭಾಗದ ವ್ಯಾಪ್ತಿಯಲ್ಲಿ 290 ಹಾಗೂ ಉಜಿರೆ ಉಪ ವಿಭಾಗದ ವ್ಯಾಪ್ತಿಯಲ್ಲಿ ರೂ. 17.53 ಕೋಟಿ ವೆಚ್ಚದಲ್ಲಿ 248, ಹೀಗೆ ಒಟ್ಟು 538 ವಿದ್ಯುತ್ ಪರಿವರ್ತಕಗಳ ಅಳವಡಿಕೆಗೆ ಶಿಲಾನ್ಯಾಸ ನೆರವೇರಿಸಲಾಯಿತು. ತಾಲೂಕಿನ 81 ಗ್ರಾ.ಪಂ.ಪರವಾಗಿ ಪುಸ್ತಕಗಳನ್ನು ನೀಡಿ ಸಚಿವರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ರಾಜ್ಯಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪಟ್ಟಣ ಪಂ.ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ವಲಯ ಮುಖ್ಯ ಇಂಜಿನಿಯರ್ ಪುಷ್ಪ, ವೃತ್ತ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ, ಇಂಜಿನಿಯರ್ ರವಿಕಾಂತ ಕಾಮತ್ ಉಪಸ್ಥಿತರಿದ್ದರು.
ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ., ಸ್ವಾಗತಿಸಿದರು, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್ ವಂದಿಸಿದರು. ಶಿಕ್ಷಕ ಅಜಿತ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.