ಬೆಳ್ತಂಗಡಿ: ಬಹುದಿನಗಳಿಂದ ಸಾರ್ವತ್ರಿಕ ಗುರುತಿನ ಚೀಟಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ ಪಡೆಯಲು ಕಾಯುತ್ತಿದ್ದ ಸಾವಿರಾರು ಫಲಾನುಭವಿಗಳು ಕೊಕ್ಕಡದ ಸಾರ್ವಾಜನಿಕ ಆಸ್ಪತ್ರೆಗೆ ಆಗಮಿಸಿ ನಿರಾಶರಾದ ಘಟನೆ ಫೆ.೧೦ರಂದು ಸಂಭವಿಸಿದೆ.
ವಿಕಲಚೇತನರು ಸರಕಾರದ ಸೌಲಭ್ಯಗಳನ್ನು ಮುಂದುವರಿಸಲು ತಮ್ಮ ಗುರುತಿನ ಚೀಟಿಯನ್ನು ಕೇಂದ್ರ ಸರ್ಕಾರ ಆದೇಶದಂತೆ ಸಾರ್ವತ್ರಿಕ ಗುರುತಿನ ಚೀಟಿಗೆ ಬದಲಾವಣೆ ಮಾಡಿಕೊಳ್ಳುವುದು ಮತ್ತು ಅಂಗವೈಕಲ್ಯ ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಈ ಉದ್ದೇಶದಿಂದ ಫೆ.೧೦ ರಂದು ಪೂರ್ವಾಹ್ನ ೧೦.೦೦ ಗಂಟೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಕ್ಕಡ ಇಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಈ ಶಿಬಿರದಲ್ಲಿ ಜಿಲ್ಲೆಯ ಬೆಳ್ತಂಗಡಿ, ಕಡಬ, ಪುತ್ತೂರು, ವಿಟ್ಲ ಸೇರಿದಂತೆ ನಾನಾ ಭಾಗದಿಂದ ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಫಲಾನುಭವಿಗಳು ಶಿಬಿರಕ್ಕೆ ಆಗಮಿಸಿದ್ದರು.
ಆರಂಭದಲ್ಲೇ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಬಂದದ್ದಲ್ಲದೆ, ಕೆಲವು ಸಿಬ್ಬಂದಿಗಳು (ವೈದ್ಯರು) ಮಧ್ಯಾಹ್ನದವರೆಗೆ ಮಾತ್ರ ಇದ್ದು ಬಳಿಕ ಗೈರಾಗಿದ್ದಾರೆ. ಸಂಬಂಧಪಟ್ಟ ವೈದ್ಯರು ಸಂಜೆಯವರೆಗೆ ಇದ್ದು ಫಲಾನುಭವಿಗಳ ಸಮಸ್ಯೆಗಳನ್ನು ಪರಿಹರಿಸಬೇಕಿತ್ತು. ಆದರೆ ಫಲಾನುಭವಿಗಳು ಮಾತ್ರ ಸಂಜೆಯವರೆಗೂ ಇದ್ದು ವೈದ್ಯರು ಬರುವ ನಿರೀಕ್ಷೆಯಲ್ಲಿದ್ದರು.
ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿಗಳ ಕೆಲವರಲ್ಲಿ ಶೇಕಡವಾರು ವ್ಯತ್ಯಾಸ ಕಂಡು ಬಂದಾಗ ಅವರನ್ನು ಮತ್ತೆ ತಾಲೂಕು ಆಸ್ಪತ್ರೆಗೆ ಅಥವಾ ಜಿಲ್ಲಾಸ್ಪತ್ರೆಗೆ ಬರುವಂತೆ ಹೇಳಲಾಗಿದೆ. ಈ ರೀತಿ ವೈದ್ಯರ ಸತಾಯಿಸುವಿಕೆ ಫಲಾನುಭವಿಗಳಿಗೆ ಕಿರಿಕಿರಿಯಾದಂತಾಗಿದೆ. ಮೊದಲೇ ಸಮಸ್ಯೆಯಲ್ಲಿರುವ ಈ ಫಲಾನುಭವಿಗಳಿಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.