ದೇಶದ ಸ್ವಾತಂತ್ರ್ಯ ಚಳುವಳಿಗೆ ಅಪಾರ ಕೊಡುಗೆ ನೀಡಿದ ಮಹಾತ್ಮ ಗಾಂಧಿಯವರ ಚಿಂತನೆಗಳು ಪ್ರಸ್ತುತ ದೇಶಕ್ಕೆ ಭಾರೀ ಅಗತ್ಯವಿದೆ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಎಳ್ಳಷ್ಟೂ ಭಾಗವಹಿಸದವರು ಇಂದು ದೇಶವನ್ನು ಆಳುತ್ತಿರುವುದು ದುರಂತವಾಗಿದೆ. ಮಾತ್ರವಲ್ಲದೆ ಸ್ವಾತಂತ್ರ್ಯದ ಆಶಯಗಳನ್ನು ಮಣ್ಣುಪಾಲು ಮಾಡಿ ಮತ್ತೆ ಧರ್ಮದ ಆಧಾರದಲ್ಲಿ ದೇಶ ವಿಭಜನೆಯ ಹುನ್ನಾರ ನಡೆಸುತ್ತಿರುವ ಕೋಮುವಾದಿ ಶಕ್ತಿಗಳು ವ್ಯವಸ್ಥಿತ ರೀತಿಯಲ್ಲಿ ಗಾಂಧೀಜಿಯವರ ಚಿಂತನೆಗಳ ವಿರುದ್ದ ಕೋಮುವಾದಿ ಧ್ರುವೀಕರಣಗೊಳಿಸಿ ಗಾಂಧಿ ಹತ್ಯೆಯನ್ನು ಸಮರ್ಥಿಸುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯಾಧ್ಯಕ್ಷರಾದ ರಾಘವ ಕೆ.ಯವರು ಅಭಿಪ್ರಾಯ ಪಟ್ಟರು.
ಅವರು ಮಹಾತ್ಮ ಗಾಂಧಿಯವರ 74ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ತಾ. 30-01-2022ರಂದು ನಗರದ ವಿಕಾಸ ಕಚೇರಿಯಲ್ಲಿ ಅಯೋಜಿಸಿದ ಸೌಹಾರ್ದ ಭಾರತಕ್ಕೆ ಎದುರಾಗಿರುವ ಸವಾಲುಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಮಂಡಿಸುತ್ತಾ ಈ ಮಾತುಗಳನ್ನು ಹೇಳಿದರು.
CPIM ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತ್ತಾ, ಗಾಂಧೀಜಿಯವರ ವ್ಯಕ್ತಿತ್ವ ಹಾಗೂ ಚಿಂತನೆಗಳು ಜಗತ್ತಿನಾದ್ಯಂತ ಪ್ರಭಾವಿಸಿದೆ. ದೇಶದ ಐಕ್ಯತೆ ಮತ್ತು ಸೌಹಾರ್ದತೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಗಾಂಧಿಯವರ ಚಿಂತನೆಗಳನ್ನು ಇಡೀ ದೇಶವೇ ಮೈಗೂಡಿಸಬೇಕಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ ಸೌಹಾರ್ದ ಭಾರತದ ನಿರ್ಮಾಣದಲ್ಲಿ ಕೋಮುವಾದಿ ಶಕ್ತಿಗಳು ತೊಡಕಾಗಿದ್ದು, ಕೋಮು ವಿಷಬೀಜವನ್ನು ಬಿತ್ತಿ ಮತ್ತೆ ದೇಶ ಒಡೆಯಲು ಹುನ್ನಾರ ನಡೆಸುತ್ತಿದೆ. ಇಂತಹ ಕಠಿಣ ಸವಾಲನ್ನು ಎದುರಿಸಿ ದೇಶವನ್ನು ಉಳಿಸಲು ಎಲ್ಲಾ ಜಾತ್ಯಾತೀತ ಪ್ರಗತಿಪರ ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಂದಾಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಬಶೀರ್ ಪಂಜಿಮೊಗರು ರವರು ವಂದಿಸಿದರು.