ನಂಜನಗೂಡು : ಸರ್ಕಾರದಿಂದ ಮಂಜೂರು ಆಗಿರುವ ಮನೆಗಳ ಹಂಚಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ತಾಲೂಕಿನ ಹಾಡ್ಯ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದಿದೆ.
ಗ್ರಾಮಪಂಚಾಯಿತಿ ಆವರಣದಲ್ಲಿ ಸೋಮವಾರ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಆರಂಭದಲ್ಲಿ ಮನೆಗಳ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆ ತಾರಕಕ್ಕೇರಿ ಗ್ರಾಮದ ಬಿಜೆಪಿಯ ವೀರಭದ್ರ ಅಲಿಯಾಸ್ ಪಾಪು ಹಾಗೂ ಕಾಂಗ್ರೆಸ್ನ ಕಾರ್ಯಕರ್ತ ರಾಜು ನಡುವೆ ಮಾತಿನ ಚಕಮಕಿ ಆರಂಭವಾಯಿತು. ಇದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು.
ಈ ವೇಳೆ ಎರಡು ಗುಂಪುಗಳು ಕುರ್ಚಿಯಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಲ್ಲದೆ, ಕುರ್ಚಿಗಳನ್ನು ದಿಕ್ಕಾಪಾಲಾಗಿ ಎಸೆದು ಗ್ರಾಮ ಸಭೆಯ ಆವರಣವನ್ನು ಸಮರಾಂಗಣ ಮಾಡಿದರು. ಈ ಹೊಡೆದಾಟ ಬಡಿದಾಟದಿಂದ ಗ್ರಾಮಸಭೆಗೆ ಆಗಮಿಸಿದ ಕೆಲವರಿಗೆ ಗಾಯಗಳಾದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ತಿಳಿಗೊಳಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಪಂ ಪಿಡಿಓ ಕರಿಯಪ್ಪ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗ್ರಾಮ ಸಭೆ ನಡೆಸುವ ವೇಳೆ ವೈಯಕ್ತಿಕ ದ್ವೇಷದಿಂದ ಆರು ಮಂದಿ ಏಕಾಏಕಿ ಗ್ರಾಮ ಸಭೆಗೆ ಬಂದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ