ಬೆಳ್ತಂಗಡಿ: ಮೃತ್ಯುಂಜಯ ನೇತ್ರಾವತಿ ನದಿಗಳ ಕಿಂಡಿ ಅಣೆಕಟ್ಟುಗಳಲ್ಲಿ ರಾಶಿರಾಶಿ ಮರಮಟ್ಟು ಹಾಗೂ ಸಂಗ್ರಹಗೊಂಡಿದೆ. ಬೃಹತ್ ಗಾತ್ರದ ಮರಮಟ್ಟುಗಳು ಸೇತುವೆ,ಕಿಂಡಿ ಅಣೆಕಟ್ಟುಗಳಿಗೆ ಬಡಿದಿದೆ.ಕಳೆದ ವಾರ ಮಳೆಹಾನಿಗೊಳಗಾಗಿ ಪಂಚಾಯತಿ ವತಿಯಿಂದ ದುರಸ್ತಿಗೊಂಡು ಸಂಪರ್ಕಕ್ಕೆ ಯೋಗ್ಯವಾಗಿದ್ದ ಮಿತ್ತಬಾಗಿಲು ಗ್ರಾಮದ ಕೊಪ್ಪದಗಂಡಿ ಕಿರುಸೇತುವೆ ನೇತ್ರಾವತಿಯಲ್ಲಿ ಹರಿದ ಭಾರಿ ನೀರಿನ ಪರಿಣಾಮ ಸಂಪರ್ಕ ಕಳೆದುಕೊಂಡಿದೆ. ಮುಂಡಾಜೆಯ ಮೃತ್ಯುಂಜಯ ನದಿಯ ಕಾಪು,ಕಡಂಬಳ್ಳಿ ಕಿಂಡಿ ಅಣೆಕಟ್ಟು, ಕಲ್ಮಂಜದ ಆನಂಗಳ್ಳಿ ಕಿಂಡಿ ಅಣೆಕಟ್ಟು, ಚಾರ್ಮಾಡಿಯ ಅರಣ ಪಾದೆ ಕಿರುಸೇತುವೆ ಮೊದಲಾದ ಪ್ರದೇಶಗಳಲ್ಲಿ ರಾಶಿರಾಶಿ ಮರಮಟ್ಟು ಹಾಗೂ ಕಸ ಸಂಗ್ರಹಗೊಂಡಿದೆ. ನಿಡಿಗಲ್ ಕಿಂಡಿ ಅಣೆಕಟ್ಟಿನಲ್ಲೂ ತ್ಯಾಜ್ಯ ಸಂಗ್ರಹಗೊಂಡಿದ್ದು, ಇದರ ಕೆಳಭಾಗದ ನದಿನೀರಲ್ಲಿ ಸಾಕಷ್ಟು ಬಾಟಲಿ,ಪ್ಲಾಸ್ಟಿಕ್ ತ್ಯಾಜ್ಯ ತೇಲುತ್ತಿದೆ.ಈ ಕಿಂಡಿ ಅಣೆಕಟ್ಟಿನ ಒಂದು ಭಾಗದ ತಡೆಗೋಡೆಯ ಬದಿಯ ಮಣ್ಣು ಕುಸಿದು ಹೋಗಿ ಹೊಂಡ ನಿರ್ಮಾಣ ವಾಗಿದ್ದು ಕಿಂಡಿ ಅಣೆಕಟ್ಟಿಗೆ ಅಪಾಯದ ಸ್ಥಿತಿ ಎದುರಾಗಿದೆ. ನದಿಗಳ ನೀರು ನುಗ್ಗಿರುವ ತೋಟಗಳಲ್ಲೂ ಪ್ಲಾಸ್ಟಿಕ್,ಬಾಟಲಿ ಹಾಗೂ ತ್ಯಾಜ್ಯ ಬಂದು ಬಿದ್ದಿದೆ. ಗದ್ದೆಗಳಿಗೆ ನೀರು ನುಗ್ಗಿ ಪೈರು ಹಾಳಾಗಿದೆ. ತೋಟಗಳಿಗೆ ನೀರು ಹರಿದು ಸಾವಿರಾರು ರೂ. ಮೌಲ್ಯದ ಹಣ್ಣಡಿಕೆ ನದಿ ಪಾಲಾಗಿದೆ. ಹೊಸದಾಗಿ ನೆಟ್ಟಿರುವ ಅಡಿಕೆ ಗಿಡಗಳಿಗೂ ನದಿ ನೀರು ಹಾನಿ ಉಂಟು ಮಾಡಿದೆ.
ಸೋಮವಾರ ಸಂಜೆ 4ರಿಂದ ಮಂಗಳವಾರ ಬೆಳಿಗ್ಗೆ 9ಗಂಟೆ ತನಕವೂ ಮಳೆ ಸುರಿದಿದೆ. ಮಧ್ಯಾಹ್ನ11ಗಂಟೆ ಬಳಿಕ ಮತ್ತೆ ಆರಂಭವಾದ ಮಳೆ ನದಿಗಳ ನೀರಿನ ಮಟ್ಟದಲ್ಲಿ ಆಗಾಗ ವಿಪರೀತ ಏರಿಳಿತ ಉಂಟಾಗಲು ಕಾರಣವಾಗಿದೆ.
“ಸೋಮವಾರ ಸಂಜೆ ಬಳಿಕ ತಾಲೂಕಿನ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದರೂ ಯಾವುದೇ ರೀತಿಯ ಅಪಾಯದ ಸ್ಥಿತಿ ಅಥವಾ ಹಾನಿ ಬಗ್ಗೆ ವರದಿಯಾಗಿಲ್ಲ. ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಅಗತ್ಯ ಸಂದರ್ಭ, ಹೆಚ್ಚಿನ ಕ್ರಮಗಳಿಗೆ ಇಲಾಖೆಯಿಂದ ಸಿದ್ಧತೆ ನಡೆದಿದೆ.”