ಬೆಳ್ತಂಗಡಿ: ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿ ಉಂಟಾಗುವ ಸಮಸ್ಯೆಗೆ ಮುಕ್ತಿಯೇ ಇಲ್ಲದಂತಾಗಿದೆ. ನಾಗರಿಕರು ಶಾಪ ಹಾಕುತ್ತಲೇ ಸಮಸ್ಯೆಯನ್ನು ಅನಿವಾರ್ಯವಾಗಿ ಎದುರಿಸುತ್ತಿದ್ದಾರೆ.
ಮಂಗಳವಾರ ಸುರಿದ ಭಾರಿ ಮಳೆಗೆ ಅದೇ ಬೃಹತ್ ಸಮಸ್ಯೆ ಎದುರಾಗಿದೆ. ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73ರ ಉಜಿರೆಯ ಕೆಳಗಿನ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆ ನದಿಯಾಗಿ ಮಾರ್ಪಟ್ಟಿತು. ಮಳೆನೀರು ರಸ್ತೆಯಲ್ಲಿ ಸುಮಾರು ಒಂದು ಅಡಿಗಿಂತ ಅಧಿಕ ನಿರಂತರ ಹರಿದು ವಾಹನ ಸವಾರರು, ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು. ಸಮೀಪದ ಕೆಲವು ಅಂಗಡಿಗಳ ಮುಂಭಾಗದ ತನಕವು ಮಳೆ ನೀರು ಹರಿದು ಹೋಯಿತು. ಮಳೆನೀರಿನ ಜತೆ ಸಾಕಷ್ಟು ತ್ಯಾಜ್ಯವು ಅಲ್ಲಲ್ಲಿ ಕಂಡು ಬಂದಿದೆ. ಕಳೆದ ವಾರವೂ ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ ಮಳೆ ಸುರಿದರೆ ಅದು ಇಲ್ಲಿ ಮಾಮೂಲಾಗಿ ಬಿಟ್ಟಿದೆ.
ಹೆದ್ದಾರಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಸಮೀಕ್ಷೆಗಳು ಈಗಾಗಲೇ ನಡೆದಿವೆ. ಆದರೆ ಹೆದ್ದಾರಿ ನಿರ್ಮಾಣ ಆಗುವ ತನಕ ಈ ರೀತಿಯಾದರೆ ಇಲ್ಲಿ ಸಂಚರಿಸುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇಲಾಖೆ ತಾತ್ಕಾಲಿಕವಾಗಿ ಯಾವುದೇ ವ್ಯವಸ್ಥೆ ಕೈಗೊಳ್ಳದಿದ್ದರೆ ಇದು ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಮುಂದುವರಿಯಲಿದೆ.