ಉಳ್ಳಾಲ : ಕಳೆದ ಕೆಲ ತಿಂಗಳಿಂದ ಜಿಲ್ಲೆಯ ಕಾರಣೀಕ ಕೊರಗಜ್ಜನ ಕ್ಷೇತ್ರ ಸೇರಿದಂತೆ ದೈವ, ದೇವಸ್ಥಾನ,ಮಸೀದಿಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ದೇವದಾಸ್ ದೇಸಾಯಿಯ ಮನೆಗೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ.
ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಹುಬ್ಬಳ್ಳಿ ಮೂಲದ ದೇವದಾಸ್ ದೇಸಾಯಿಯನ್ನ ಪೊಲೀಸರು ಬಂಧಿಸಿದ್ದಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದೇವದಾಸ್ ಕೋಟೆಕಾರು ಗ್ರಾಮದ ಮಿತ್ರನಗರ ಎಂಬಲ್ಲಿ ಮನೆ ಹೊಂದಿದ್ದು ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಕೊರಗಜ್ಜ ದೈವಕ್ಕೆ ನಿರಂತರ ಅಪಚಾರವೆಸಗುತ್ತಿದ್ದ ಆರೋಪಿ ದೇವದಾಸ್ ಬಂಧನವಾಗುತ್ತಿದ್ದಂತೆ ಹಿಂದೂ ಕಾರ್ಯಕರ್ತರ ಆಕ್ರೋಶ ಬುಗಿಲೆದ್ದಿತ್ತು. ಮಿತ್ರನಗರದಲ್ಲಿರುವ ದೇವದಾಸ್ನ ಮನೆಗೆ ಉದ್ರಿಕ್ತ ಹಿಂದೂ ಕಾರ್ಯಕರ್ತರು ಕಲ್ಲೆಸೆದಿದ್ದು ಮನೆಯ ಆವರಣ ಗೋಡೆಯ ಸಿಮೆಂಟ್ ನಿರ್ಮಿತ ಗೋಲದ ಆಕೃತಿಯನ್ನ ಪುಡಿಗೈದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉಳ್ಳಾಲ ಪೊಲೀಸ್ ಠಾಣಾ ಪಿಐ ಸಂದೀಪ್,ಪಿಎಸ್ ಐ ಪ್ರದೀಪ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಆರೋಪಿ ದೇವದಾಸ್ ಮನೆಗೆ ಬಿಗಿ ಬಂದೋಬಸ್ತ್ ನೀಡಿದ್ದಾರೆ.ಆರೋಪಿ ದೇವದಾಸನ್ನ ಮಹಜರಿಗಾಗಿ ಮನೆಗೆ ಕರೆತರುವ ಬಗ್ಗೆ ಸ್ಥಳೀಯರಿಗೆ ತಿಳಿದಿದ್ದು ಸ್ತಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಪೊಲೀಸರು ಎಲ್ಲರನ್ನೂ ಚದುರಿಸಿದ್ದಾರೆ.