ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ಹೊಸವರ್ಷಾಚರಣೆ ಸಂದರ್ಭ ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇಗುಲದಿಂದ ಭಕ್ತರಿಗೆ ತಿರುಪತಿ ಲಡ್ಡು ಪ್ರಸಾದವನ್ನು ವಿತರಿಸಲಾಗುತ್ತಿದ್ದು, ಜನವರಿ 1 ರಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ಲಡ್ಡು ಪ್ರಸಾದ ವಿತರಣೆ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ಸುಮಾರು ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ.
ಶ್ರೀ ಯೋಗಾ ನರಸಿಂಹ ದೇವಸ್ಥಾನದ ಪ್ರೊ.ಭಾಷ್ಯಂ ಸ್ವಾಮೀಜಿ ಅವರು ಭಕ್ತರಿಗೆ ಲಡ್ಡುಗಳನ್ನು ವಿತರಿಸಲಿದ್ದಾರೆ. ಹೊಸವರ್ಷದಂದು ದೇಗುಲದಲ್ಲಿ ಬೆಳಿಗ್ಗೆ 4ಗಂಟೆಯಿಂದ ಶ್ರೀಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ, ತಮಿಳುನಾಡಿನ ಶ್ರೀರಂಗಕ್ಷೇತ್ರದಿಂದ, ತಮಿಳುನಾಡಿನ ಮಧುರೈಕ್ಷೇತ್ರದಿಂದ ಹಾಗೂ ಶ್ರೀವಿಲ್ಲಿ ಪುತ್ತೂರು ಎಂಬ ದಿವ್ಯ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮಾರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ಪೂಜೆ ನಡೆಯಲಿದೆ.
ಭಕ್ತರಿಗೆ ಪ್ರಸಾದವಾಗಿ ಲಡ್ಡು ವಿತರಿಸುವ ಸಲುವಾಗಿ ಅಂದಾಜು ಎರಡು ಸಾವಿರ ಗ್ರಾಂ ತೂಕದ ಹತ್ತು ಸಾವಿರ ಲಡ್ಡುಗಳು ಹಾಗೂ ಇನ್ನೂರು ಗ್ರಾಂ ತೂಕದ 2ಎರಡು ಲಕ್ಷ ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
ಲಡ್ಡು ಪ್ರಸಾದವನ್ನು ವಿಶೇಷವಾಗಿ 6ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ಡಿ.20ರಿಂದ ಪ್ರಾರಂಭಿಸಿ 31ರವರೆಗೂ ಲಡ್ಡು ತಯಾರಿಕಾ ಕಾರ್ಯ ನಡೆದಿದೆ. ಲಡ್ಡು ತಯಾರಿಸಲು 50ಕ್ವಿಂಟಾಲ್ ಕಡಲೆಹಿಟ್ಟು, 100ಕ್ವಿಂಟಾಲ್ ಸಕ್ಕರೆ, 4000ಲೀಟರ್ ಖಾದ್ಯ ತೈಲ, 200ಕೆಜಿ ಗೋಡಂಬಿ, 200ಕೆಜಿ ಒಣದ್ರಾಕ್ಷಿ, 100ಕೆಜಿ ಬಾದಾಮಿ, 200ಕೆಜಿ ಡೈಮಂಡ್ ಸಕ್ಕರೆ, 500ಕೆಜಿ ಬೂರಾ ಸಕ್ಕರೆ, 10ಕೆಜಿ ಪಿಸ್ತಾ, 20ಕೆಜಿ ಏಲಕ್ಕಿ, 20ಕೆಜಿ ಜಾಕಾಯಿ ಜಾಪತ್ರೆ, 5ಕೆಜಿ ಪಚ್ಚೆ ಕರ್ಪೂರ, 100ಕೆಜಿ ಲವಂಗಗಳನ್ನು ಬಳಸಿ ತಯಾರಿಸಲಾಗಿದೆ.
ಲೋಕಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ವಿಶ್ವಭ್ರಾತೃತ್ವ, ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಯೋಗಾ ನರಸಿಂಹ ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ತಿಳಿಸಿದ್ದಾರೆ.