ಬೆಳ್ತಂಗಡಿ: ಸದಾ ಸಮಸ್ಯೆಯನ್ನುಂಟು ಮಾಡುತ್ತಿದ್ದ, ಜನರ ಶಾಪಕ್ಕೊಳಗಾಗಿದ್ದ ಉಜಿರೆಯಲ್ಲಿನ ರಸ್ತೆಯೊಂದು ಸುಗಮ ಸಂಚಾರಕ್ಕೆ ಅಣಿಯಾಗುತ್ತಿದೆ. ಯಾವಾಗಲೂ ಪಾರ್ಕಿಂಗ್ ಸಮಸ್ಯೆ, ವಾಹನ ಸಂಚಾರ ಕಿರಿಕಿರಿಯ ಉಜಿರೆ ಪೇಟೆಯ ಕಾಲೇಜು ರಸ್ತೆ ದ್ವಿಪಥ ಕಾಮಗಾರಿಯನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಉಜಿರೆಯ ಕಾಲೇಜು ರಸ್ತೆಯ ಬಸ್ ನಿಲ್ದಾಣದಿಂದ ಬೆಳಾಲು ಕ್ರಾಸ್ ತನಕ ಚರಂಡಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ.
ಈ ವ್ಯಾಪ್ತಿಯ ಚರಂಡಿಯನ್ನು ಅಗಲ ಗೊಳಿಸಿದ್ದು ಕೆಲವು ಕಡೆ ಅದಕ್ಕೆ ಕಾಂಕ್ರೀಟ್ ಹಾಕುವ ಕೆಲಸ ನಡೆದಿದೆ.ಉಳಿದೆಡೆ ಗಿಡಗಂಟಿ ತೆರವು, ತ್ಯಾಜ್ಯ ವಿಲೇವಾರಿ ಸೇರಿದಂತೆ ಇತರ ಕೆಲಸಗಳನ್ನು ಮಾಡಲಾಗುತ್ತಿದೆ. ಕಳೆದ ಹತ್ತು ದಿನಗಳ ಹಿಂದೆ ರಸ್ತೆ ಅಭಿವೃದ್ಧಿ ಸಮೀಕ್ಷೆ ಕಾರ್ಯ ನಡೆದಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
50 ಅಡಿ ಅಗಲದ ರಸ್ತೆ.
ಉಜಿರೆಯ ದ್ವಾರದ ಬಳಿಯಿಂದ ಎಂಜಿನಿಯರಿಂಗ್ ಕಾಲೇಜಿನ ತನಕ ಸುಮಾರು 500ಮೀ. ಉದ್ದ, 50 ಅಡಿ ಅಗಲದ ರಸ್ತೆ 4.5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಹೊಂದಲಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೊಳಪಟ್ಟ ರಸ್ತೆಯಲ್ಲಿ 1 ಮೀ. ಅಗಲದ ಮೀಡಿಯನ್, 21 ಅಡಿ ಅಗಲದ ಸಂಚಾರ ರಸ್ತೆ,ಎರಡೂ ಬದಿ ತಲಾ 10 ಅಡಿ ಅಗಲ ಇಂಟರ್ ಲಾಕ್ ಸಹಿತ ಫುಟ್ ಪಾತ್, ಇದರ ಅಡಿಯಲ್ಲಿ ಸುಸಜ್ಜಿತ ಚರಂಡಿ ನಿರ್ಮಾಣವಾಗಲಿದೆ. ವಾಹನ ಪಾರ್ಕಿಂಗ್ ಗೂ ಅವಕಾಶ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ
ಅವ್ಯವಸ್ಥೆಗೆ ಸಿಗಲಿದೆಯೇ ಮುಕ್ತಿ
ಕಾಲೇಜು ರಸ್ತೆಯ ಅವೈಜ್ಞಾನಿಕ ಬಸ್ ನಿಲ್ದಾಣ, ವಾಹನದಟ್ಟಣೆ, ಅವ್ಯವಸ್ಥಿತ ಪಾರ್ಕಿಂಗ್,ಅನಧಿಕೃತ ಬೀದಿ ವ್ಯಾಪಾರ ಇತ್ಯಾದಿಗಳಿಂದ ಈ ರಸ್ತೆಯಲ್ಲಿ ಸಂಚಾರ ನಡೆಸಲು ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಪಾದಚಾರಿಗಳಿಗೆ ರಸ್ತೆದಾಟಲು, ನಡೆದುಕೊಂಡು ಹೋಗಲು ಭಯದ ವಾತಾವರಣ ಇದೆ. ರಸ್ತೆಯ ಹೊರಭಾಗದಲ್ಲಿರುವ ಅಂಗಡಿಗಳಿಗೆ ಹೋಗಬೇಕಾದರೂ ವಾಹನಗಳನ್ನು ದಾಟಿ ಹೋಗುವುದು ಒಂದು ಸಾಹಸವೇ ಸರಿ. ಇದೀಗ ಈ ರಸ್ತೆಯ ಅಭಿವೃದ್ಧಿಯಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಹಲವಾರು ವರ್ಷಗಳ ಬೇಡಿಕೆಯೊಂದು ಈಡೇರುವ ಕುರಿತು ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಟೆಸ್ಟಿಂಗ್ ಲ್ಯಾಬ್
ಕಾಮಗಾರಿಗಳ ವೇಳೆ ಗುಣಮಟ್ಟ ಪರೀಕ್ಷೆ ನಡೆಸುವ ಸಲುವಾಗಿ ಈ ಹಿಂದೆ ಮಂಗಳೂರು ಅಥವಾ ಸುರತ್ಕಲ್ ಎನ್ಐಟಿಕೆ ಕೇಂದ್ರಕ್ಕೆ ಕಚ್ಚಾವಸ್ತು, ಉಪಕರಣಗಳನ್ನು ಕಳುಹಿಸಬೇಕಾಗಿತ್ತು. ಆದರೆ ಇದೀಗ ಬೆಳ್ತಂಗಡಿ ತಾಲೂಕಿನಲ್ಲಿ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ನ್ನು ಪರಿಚಯಿಸಲಾಗಿದೆ. ಇದರಿಂದ ಜಲ್ಲಿ, ಮರಳು,ಸಿಮೆಂಟು, ಕಬ್ಬಿಣ ಮೊದಲಾದ ಎಲ್ಲ ಕಚ್ಚಾ ವಸ್ತುಗಳ ಗುಣಮಟ್ಟ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸಲಾಗುತ್ತಿದೆ. ಇದು ಕಾಮಗಾರಿಯ ಉತ್ತಮ ಗುಣಮಟ್ಟಕ್ಕೆ ಹಾಗೂ ಸಮಯ ಉಳಿತಾಯಕ್ಕೆ ಪೂರಕವಾಗಿದೆ.