ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾ.ಪಂ.ವ್ಯಾಪ್ತಿಯ ಅಣಿಯೂರು ಎಂಬಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯುವ ವಿಚಾರದಲ್ಲಿ ಮಂಗಳವಾರ ಸ್ಥಳ ಮಹಜರು ನಡೆಸಲು ಬಂದ ಅಬಕಾರಿ ಅಧಿಕಾರಿಗಳ ಬಳಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಎಂದು ಆಗ್ರಹಿಸಿದರು.
ನೆರಿಯದ ಅಣಿಯೂರು ಸಮೀಪ ತೆರೆಯಲು ಉದ್ದೇಶಿಸಿದ ಮದ್ಯ ಮಳಿಗೆ ವಿಚಾರವಾಗಿ ಈ ಹಿಂದಿನ ಗ್ರಾ.ಪಂ. ಆಡಳಿತ ಅನುಮತಿ ನೀಡಿತ್ತೇ ಎಂಬ ವಿಷಯದಲ್ಲಿ ಗೊಂದಲ ಏರ್ಪಟ್ಟು ಈ ವಿಚಾರವಾಗಿ ಪ್ರಸಕ್ತ ಗ್ರಾಮ ಸಭೆಯಲ್ಲು ಚರ್ಚೆ ನಡೆದಿತ್ತು. ಈ ಬೆಳವಣಿಗೆ ನಡುವೆಯೇ ಮದ್ಯ ಮಳಿಗೆಗೆ ಕಟ್ಟಡ ನಿರ್ಮಿಸಲಾಗಿದ್ದರಿಂದ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಆಕ್ರೋಶ ಹೊರಹಾಕಿ ಗ್ರಾ.ಪಂ. ಅವಕಾಶ ನೀಡದಂತೆ ಒತ್ತಡ ಹೇರಿತ್ತು. ಗ್ರಾ.ಪಂ. ಅನುಮತಿ ನಿರಾಕರಣೆಯ ನಡುವೆಯೇ ಮದ್ಯದ ಅಂಗಡಿ ತೆರೆಯಲು ಬೇಕಾದ ಪ್ರಕ್ರಿಯೆಗಳಿಗೆ ಮುಂದಾಗಿದ್ದರಿಂದ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಜಿಲ್ಲಾಧಿಕಾರಿ ಸಹಿತ ಅಬಕಾರಿ ಆಯುಕ್ತರಿಗೆ ಆಕ್ಷೇಪಣಾ ದೂರು ನೀಡಿದ್ದರು.
ಸಾರ್ವಜನಿಕರಿಂದ, ನೆರಿಯ ಗ್ರಾ.ಪಂ. ಆಡಳಿತದಿಂದ,ವಿವಿಧ ಸಂಘ ಸಂಸ್ಥೆಯವರು ಸಲ್ಲಿಸಿದ ಆಕ್ಷೇಪದ ಅರ್ಜಿಗಳ ಬಗ್ಗೆ ಸ್ಥಳ ತನಿಖೆಗೆ ಮಂಗಳವಾರ ಆಗಮಿಸಿದ ಅಬಕಾರಿ ಜಂಟಿ ಅಧೀಕ್ಷಕರ ಮುಂದೆ ನೆರಿಯ ಗ್ರಾ.ಪಂ. ಸದಸ್ಯರಿಬ್ಬರು ಸಾರ್ವಜನಿಕರ ಆಕ್ಷೇಪದ ನಡುವೆಯೂ ಮದ್ಯದ ಮಳಿಗೆ ಬೇಕು ಎಂದು ತಿಳಿಸಿದ್ದು,ಈ ವಿಚಾರವಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿಗೂ ಕಾರಣವಾಯಿತು. ಬಳಿಕ ಈ ವಿಚಾರವಾಗಿ ಅಧಿಕಾರಿಗಳು ಗ್ರಾಮಸ್ಥರಿಂದ ಹೇಳಿಕೆ ಪಡೆದು ತೆರಳಿದ ಘಟನೆ ನಡೆಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.