ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಬೆಳ್ತಂಗಡಿ ಇದರ ಸ್ಥಳಾಂತರಗೊಂಡಿರುವ ನೂತನ ಕಚೇರಿಯ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಅ. 18 ರಂದು ನೆರವೇರಲಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ. ತಿಳಿಸಿದರು.
ಅವರು ಮಂಗಳವಾರ ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕಾರ್ಮಿಕರ ಹಿತರಕ್ಷಣೆ ಹಾಗೂ ಸಧೃಢ ರಾಷ್ಟ್ರ ನಿರ್ಮಾಣದ ಚಿಂತನೆಯೊಂದಿಗೆ ಪ್ರಾರಂಭವಾದ ಬಿ.ಎಂ.ಎಸ್.ನ ಬೆಳ್ತಂಗಡಿ ತಾಲೂಕು ಘಟಕಕ್ಕೆ ಮೂರು ವರ್ಷವಾಗಿದೆ. ತಾಲೂಕಿನಲ್ಲಿ 5000 ಕ್ಕಿಂತಲೂ ಹೆಚ್ಚು ಕಟ್ಟಡ ಕಾರ್ಮಿಕರನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾವಣೆ ಮಾಡಿಸಿ ಅವರಿಗೆ ವಿವಿಧ ಸೌಲಭ್ಯಗಳನ್ನು ಸಿಗುವಂತೆ ಮಾಡಲಾಗಿದೆ. ನಮ್ಮ ಸಂಘದ ಸದಸ್ಯರಾಗಿರುವ ಕಟ್ಟಡ ಕಾರ್ಮಿಕರಿಗೆ ಈ ವರ್ಷ ಸ್ಕಾಲರ್ ಶಿಪ್, ವಿವಾಹ ಸಹಾಯಧನ, ಮರಣ ಪರಿಹಾರ ಹಾಗೂ ಕೋವಿಡ್ ಸಹಾಯಧನ ಸುಮಾರು 1ಕೋಟಿ 50 ಲಕ್ಷ ಕ್ಕಿಂತಲೂ ಮಿಕ್ಕಿ ನೀಡಲಾಗಿದೆ . ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಉದ್ದೇಶ ಸಂಘ ಹೊಂದಿದೆ ಎಂದರು.
ಇದೀಗ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸುವ ಉದ್ದೇಶ ಹೊಂದಿದ್ದು ಅದಕ್ಕಾಗಿ ಶಾಸಕರ ಕಾರ್ಯಾಲಯದ ಎದುರು ನೂತನ ಕಚೇರಿಯನ್ನು ತೆರೆಯುತ್ತಿದ್ದೇವೆ. ಇದರ ಉದ್ಘಾಟನೆಯನ್ನು ರಾ.ಸ್ವ.ಸಂಘದ ಪ್ರಾಂತ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ನೆರವೇರಿಸಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ ಪೂಂಜ, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಇ., ನ.ಪಂ.ಅಧ್ಯಕ್ಷೆ ರಜನಿ ಕುಡ್ವ, ಭಾ.ಮ.ಸಂ.ದ ನಿಕಟಪೂರ್ವ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಭಗವಾನ್ ದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ನ.ಪಂ.ಉಪಾಧ್ಯಕ್ಷ ಜಯಾನಂದ ಗೌಡ ಮತ್ತಿತರರು ಭಾಗವಹಿಸಲಿದ್ದಾರೆ.