ಪುತ್ತೂರು: ಮನೆಯಲ್ಲಿ ತಯಾರಿಸಿದ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 10 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅ.6ರಂದು ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದೆ.
ಪಡ್ನೂರು ಕೊಡಂಗೆ ಸಾಂತಪ್ಪ ಎಂಬವರ ಪುತ್ರ ರಾಘವ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ರಾಘವ, ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ಪುತ್ರಿ ತೃಷಾ, ಸಹೋದರಿ ಬೇಬಿ, ಬಾವಂದಿರಾದ ದೇವಪ್ಪ, ಕೇಶವ, ರಾಘವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಷ್ ಹಾಗೂ ಅರ್ಚನಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮ್ಮ ಮನೆ ಸಮೀಪದಲ್ಲಿ ದೊರೆತ ಅಣಬೆಯನ್ನು ಪದಾರ್ಥ ಮಾಡಿ ಮಧ್ಯಾಹ್ನ ಊಟದಲ್ಲಿ ಸೇವಿಸಿದ್ದಾರೆ. ಊಟವಾದ ಕೆಲ ಸಮಯಗಳ ಬಳಿಕ ಸೇವನೆ ಮಾಡಿದವರೆಲ್ಲರ ಆರೋಗ್ಯದಲ್ಲಿ ತೀವ್ರ ತರದ ಏರುಪೇರು ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದವರ ಪೈಕಿ ಹೊನ್ನಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠoದೂರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.