ಮಂಡ್ಯ : ಸೆ.9ರಿಂದ ಆರಂಭವಾಗುವ ಶ್ರೀರಂಗಪಟ್ಟಣ ದಸರಾವನ್ನು ಉದ್ಘಾಟಿಸುವಂತೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಬುಧವಾರ ಅಧೀಕೃತವಾಗಿ ಆಹ್ವಾನ ನೀಡಿದರು.
ಇಂದು ನಾಗಮಂಗಲದ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಚಿವರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಲ ತಾಂಬೂಲ ನೀಡಿ ಗೌರವಿಸಿದರು. ಆನೆಯ ಕಲಾಕೃತಿಯ ಸ್ಮರಣಿಕೆ ನೀಡಿ ದಸರಾ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದರು.
ಸ್ವಾಮೀಜಿಯವರಿಗೆ ದಸರಾ ಆಹ್ವಾನ ಪತ್ರಿಕೆ ನೀಡಿ, ಶ್ರೀಗಳಿಂದ ಶ್ರೀರಂಗಪಟ್ಟಣ ದಸರಾ ಪೋಸ್ಟರ್ನ್ನು ಬಿಡುಗಡೆಗೊಳಿಸಿದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ನಾಡಿನ ಸಂಸ್ಕೃತಿಯ ಸಂಕೇತವಾಗಿರುವಂತಹ ದಸರಾವು ನಮ್ಮ ಶ್ರೀರಂಗಪಟ್ಟಣದಲ್ಲಿ ನಡೆಯುತ್ತದೆ. ಮೈಸೂರು ದಸರಾದ ರೀತಿಯಲ್ಲಿ ಮುಂಚೆ ಮೂಲವಾಗಿ ಪ್ರಾರಂಭವಾಗಿದ್ದು ನಮ್ಮ ಶ್ರೀರಂಗಪಟ್ಟಣದಲ್ಲಿ. ಇದೇ 9 ರಂದು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನಮ್ಮ ಹಿರಿಯರು ಅತ್ಯುತ್ತಮವಾದ ಸಂಸ್ಕೃತಿಯನ್ನು ನಮ್ಮ ನಾಡಿಗೆ ಬಿಟ್ಟು ಹೋಗಿದ್ದಾರೆ, ಆ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ಬಡಿಸಿ-ಉಣಿಸಿ, ಆಚರಿಸಿಕೊಂಡು- ಉಳಿಸಿಕೊಂಡು ಹೋಗುವಂತದ್ದು ನಮ್ಮ ಪರಂಪರಾಗತ ಸಂಸ್ಕೃತಿ ಎಂದರು.
ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಾಡಿನ ಭಕ್ತಾದಿಗಳು, ಸಮಸ್ತ ಸಾರ್ವಜನಿಕರು ಆಗಮಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ಹಮ್ಮಿಕೊಂಡಿರುವ ಕ್ರೀಡೆ ಮತ್ತು ಇತರೆ ಮನೋರಂಜನ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿ ಎಂದು ಸಲಹೆ ನೀಡಿದರು.
ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಮೈಸೂರು ದಸರಾದ ಮೂಲ ನೆಲೆ ಶ್ರೀರಂಗಪಟ್ಟಣ, ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನಾದಿಂದ ಶ್ರೀರಂಗಪಟ್ಟಣ ದಸರಾವನ್ನು ಸರಿಯಾಗಿ ಆಚರಿಸಲು ಆಗಿರಲಿಲ್ಲ, ಆದರೆ ಈ ಬಾರಿ ಅರ್ಥಪೂರ್ಣವಾಗಿ ಮತ್ತು ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ತಾವುಗಳು ಆಗಮಿಸಿ ಈ ಬಾರಿಯ ದಸರಾವನ್ನು ಉದ್ಘಾಟಿಸಿ, ಜಂಬೂಸವಾರಿಗೆ ಚಾಲನೆ ನೀಡಿ ಎಂದು ಶ್ರೀಗಳನ್ನು ಅಧಿಕೃತವಾಗಿ ಆಹ್ವಾನಿಸಿದರು.