ಬೆಳ್ತಂಗಡಿ: ನಮ್ಮ ಕಲೆಗಳನ್ನು ಪ್ರೋತ್ಸಾಹಿಸಿ ಪ್ರಾಮಾಣಿಕತೆ ಪರಂಪರೆ ಶ್ರದ್ಧೆಯನ್ನು ಕಾಪಾಡಿ ನುಡಿ ಸಾಮ್ರಾಜ್ಯ ಸ್ಥಾಪಿಸಿದರೆ ಸ್ವರಾಜ್ಯ ಕಟ್ಟಲು ಸಾಧ್ಯ. ಬಹುತ್ವದ ಬದುಕಿಗೆ ಶ್ರದ್ಧೆ ಬೇಕು, ಆತ್ಮವಿಮರ್ಶೆ,ಭಕ್ತಿಯ ಜತೆ ನಮ್ಮನ್ನು ನಾವೇ ವಿಮರ್ಶೆಗೆ ಒಡ್ಡುವುದರಿಂದ, ಹಿರಿಯರ ಸಂಸ್ಕಾರಗಳನ್ನು ಪಾಲಿಸುವ ಮೂಲಕ ನಾಡನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಆಕಾಶವಾಣಿ ಮೈಸೂರು ಕೇಂದ್ರದ ದಿವಾಕರ ಹೆಗಡೆ ಹೇಳಿದರು.
ಅವರು ಉಜಿರೆಯಲ್ಲಿ ಎರಡು ದಿನಗಳ ಕಾಲ ಜರುಗಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ 3ನೇ ರಾಜ್ಯ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬುದ್ಧಿಯ ವಿಕಾಸಕ್ಕೆ ಭಾವದ ಜತೆಗಿನ ಬದುಕು ಸಾಗಿಸುತ್ತ ತಪ್ಪನ್ನು ಸರಿಪಡಿಸಿ ನಡೆಯಬೇಕು.ಒಂದು ತಪ್ಪಿಗೆ ಇಡೀ ವ್ಯವಸ್ಥೆಯನ್ನು ದೂರಬಾರದು. ಇಂದಿನ ಬದುಕಿನಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಬದುಕಲು ಸ್ಪರ್ಧೆಯ ಅಗತ್ಯವಿಲ್ಲ. ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಬದುಕು ನಡೆಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ನಾ.ಮೊಗಸಾಲೆ ಮಾತನಾಡಿ ಸರಕಾರಗಳು, ಸಾಹಿತ್ಯ ಅಕಾಡೆಮಿಗಳಿಗೆ ಸಾಂಸ್ಕೃತಿಕ ನೀತಿ ಇಲ್ಲದ ಕಾರಣ ಸಾಂಸ್ಕೃತಿಕ ದಿವಾಳಿ ಸ್ಥಿತಿ ಉಂಟಾಗಿದೆ. ಸರಕಾರಗಳು ಕರಾವಳಿಯನ್ನು ಪ್ರತಿಬಾರಿ ಕಡೆಗಣಿಸುತ್ತಿರುವುದು ವಿಷಾದನೀಯ. ಕೆಲವೊಂದು ವಿಚಾರಗಳನ್ನು ಮುರಿದುಕಟ್ಟುವ ಕೆಲಸ ಆಗಬೇಕು, ಅದು ಈ ಅಧಿವೇಶನದ ಮೂಲಕ ಆರಂಭವಾಗಿದೆ ಎಂದು ಹೇಳಿದರು.
ಹಿರಿಯ ಮರಾಠಿ ಸಾಹಿತಿ ನರೇಂದ್ರ ಪಾಠ ಕ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಚೇರ್ಮನ್ ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಶಿವಶರಣ ಗೊಡ್ರಾಳ್ ಸ್ವಾಗತಿಸಿದರು. ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಡಾ.ರವಿ ಮಂಡ್ಯ ವಂದಿಸಿದರು.
ಗೌರವಾರ್ಪಣೆ
ಅಧಿವೇಶನಕ್ಕೆ ಸಹಕಾರ ನೀಡಿದ ಶರತ್ ಕೃಷ್ಣ ಪಡುವೆಟ್ನಾಯ, ಡಾ. ಇ.ಸಿ.ನಿಂಗರಾಜು, ಬೆನಕ ಹೆಲ್ತ್ ಸೆಂಟರ್ ಪರವಾಗಿ ಎಸ್. ಜಿ. ಭಟ್, ಗಣೇಶ್ ಕಾಂತಾಜೆ,ನಾರಾಯಣ ಫಡ್ಕೆ,ವಸಂತಿ ವೆಂಕಟೇಶ್, ಗೀತಾ, ಸುನೀಲ್ ಹೆಗ್ಡೆ, ಭಾನುಪ್ರಕಾಶ್, ಡಾ. ಶ್ರೀಧರ್ ಭಟ್, ದೀಪಾ ಹಾಗೂ ಪ್ರಸಾದ್ ಅವರನ್ನು ಗೌರವಿಸಲಾಯಿತು.
ಪದಾಧಿಕಾರಿಗಳ ಆಯ್ಕೆ
ಅಭಾಸಪದ ಮುಂದಿನ ಅಧಿವೇಶನ ದಾವಣಗೆರೆಯಲ್ಲಿ ನಡೆಯಲಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಡಾ.ನಾ.ಮೊಗಸಾಲೆ, ಉಪಾಧ್ಯಕ್ಷರಾಗಿ ಹರಿಪ್ರಕಾಶ್ ಕೋಣೆಮನೆ ಹಾಗೂ ಎಸ್. ಜಿ. ಕೋಟಿ, ಪ್ರಧಾನ ಕಾರ್ಯದರ್ಶಿಯಾಗಿ ರಘುನಂದನ ಭಟ್, ಜತೆ ಕಾರ್ಯದರ್ಶಿಗಳಾಗಿ ಡಾ.ಮಾಧವ ಎಂ.ಕೆ, ಹಾಗೂ ಪವಿತ್ರಾ ಮೃತ್ಯುಂಜಯ ಸ್ವಾಮಿ, ಕಾರ್ಯಾಲಯ ಕಾರ್ಯದರ್ಶಿಯಾಗಿ ರಾಮಕೃಷ್ಣ ಶೌತ್ರಿ, ಖಜಾಂಚಿಯಾಗಿ ರಘು ಶೆಟ್ಟಿ, ಸದಸ್ಯರಾಗಿ ಶಿವಶರಣ ಗೊಡ್ರಾಳ್, ಜನಮೇಜಯ ಉಮರ್ಜಿ ಭಾರತಿ ಹಾಗೂ ಸಮೀರ್ಜಿ, ಗೌರವ ಸಲಹೆಗಾರರಾಗಿ ಕ.ವೆಂ.ನಾಗರಾಜ,ಪ್ರೊ. ಪ್ರೇಮಶೇಖರ ಆಯ್ಕೆಯಾದರು.