ಕಾಸರಗೋಡು: ಮಂಜೇಶ್ವರ ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಪಂಚಲೋಹ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಮಜಿಬೈಲ್ ನ ಲಕ್ಷ್ಮೀಶ (೪೦) ಬಂಧಿತ ಆರೋಪಿ. ಆಗಸ್ಟ್ ೨೦ ರಂದು ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿತ್ತು. ಗರ್ಭಗುಡಿಯೊಳಗಿದ್ದ ದೇವರ ಪಂಚ ಲೋಹ ವಿಗ್ರಹವನ್ನು ಕಳವುಗೈದು, ಕ್ಷೇತ್ರದ ಮುಂಭಾಗ ಹಾಗೂ ತೀರ್ಥ ಮಂಟಪದಲ್ಲಿದ್ದ ಕಾಣಿಕೆ ಹುಂಡಿಗಳಿಂದ ಹಣವನ್ನು ದೋಚಲಾಗಿತ್ತು .
ಬಳಿಕ ಹುಂಡಿಗಳನ್ನು ಕ್ಷೇತ್ರ ಸಮೀಪ ಎಸೆದು ಪರಾರಿಯಾಗಿದ್ದನು. ಕಳವುಗೈಯ್ಯಲಾದ ವಿಗ್ರಹ ಪೊದೆಗಳೆಡೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸಿದ್ದು, ಓರ್ವ ಆರೋಪಿಯನ್ನು ಮಂಗಳವಾರ ಸಂಜೆ ಬಂಧಿಸಿದ್ದಾರೆ.