ಮೈಸೂರು: ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಿದ್ದ ಸಾವರ್ಕರ್ ರಥಯಾತ್ರೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದು ದೇಶ ಮಹತ್ವದ ಕಾಲಘಟ್ಟದಲ್ಲಿದೆ. ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದ್ದರೆ, ಅನೇಕ ಸವಾಲುಗಳನ್ನೂ ಎದುರಿಸುತ್ತಿದೆ. ದೇಶದ ಹೆಸರಿಗೆ ಮಸಿ ಬಳಿಯುವ ಕೆಲಸವೂ ನಡೆಯುತ್ತಿದೆ. ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಲ್ಲ ಎನ್ನುವವರು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬ್ರಿಟಿಷರನ್ನು ನಡುಗಿಸಿದವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಲು ವಿರೋಧಿಸುವವರು ಬಸವಣ್ಣನ ವಚನ ಓದಲಿ. ಚಿಲ್ಲರೆ ರಾಜಕಾರಣಕ್ಕಾಗಿ ಮಸಿ ಬಳಿಯುತ್ತಿರುವುದನ್ನು ನಿಲ್ಲಿಸಲಿ ಎಂದು ಹೆಸರೇಳದೆ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ತಮ್ಮ ಹೋರಾಟದ ಮೂಲಕವೇ ಬ್ರಿಟಿಷರಿಗೆ ಆಘಾತ ನೀಡಿದವರು ಸಾವರ್ಕರ್. ಸ್ವಾತಂತ್ರ್ಯ ಹೋರಾಟದ ಜತೆಗೆ ಹಿಂದೂಧರ್ಮದ ಸುಧಾರಣೆ, ರಕ್ಷಣೆಯಲ್ಲಿ ತೊಡಗಿಕೊಂಡಿದ್ದವರು. ಅವರು ಸಾಗಿದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು. ವಿಶ್ವದ ಹೋರಾಟಗಳಲ್ಲಿ ಅವರಂತಹ ಹೋರಾಟಗಾರ ಮತ್ತೊಬ್ಬ ಇಲ್ಲ. ದೇಶದ ಅತಿ ಶ್ರೇಷ್ಠ ಹೋರಾಟಗಾರ. ಇಂದಿರಾಗಾಂಧಿ, ರಾಧಾಕೃಷ್ಞನ್ ಸೇರಿದಂತೆ ಹಲವು ಮಹಾನ್ ನಾಯಕರು ಸಾವರ್ಕರ್ ಅವರನ್ನು ಹೊಗಳಿದ್ದಾರೆ ಎಂದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶಿಷ್ಟ ಸ್ಥಾನವಿದೆ. ಸ್ವಾಂತತ್ರ್ಯಾ ನಂತರವೂ ಒಕ್ಕೂಟ ಸೇರಿದ ಮೊದಲ ರಾಜ ಮನೆತನ. ಇಂತಹ ಜಾಗದಲ್ಲಿ ರಥಯಾತ್ರೆಗೆ ಚಾಲನೆ ನೀಡಿರುವುದು ಸೌಭಾಗ್ಯ. ೮ ದಿನಗಳ ಯಾತ್ರೆ ಅಷ್ಟ ದಿಕ್ಕುಗಳಲ್ಲೂ ಸಾವರ್ಕರ್ ಅವರ ಸಂದೇಶ, ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶ ಸಾರಲಿದೆ. ಯುವಶಕ್ತಿ, ರಾಷ್ಟ್ರಪ್ರೇಮಿಗಳನ್ನು ಪ್ರೇರೇಪಿಸಿ, ದೇಶದ ವಿದ್ರೋಹಿಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ರಥಯಾತ್ರೆ ಮಾಡಲಿದೆ ಎಂದರು.
ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ರಥಯಾತ್ರೆಯ ಸಂಚಾಲಕ ರಜತ್, ಕರ್ನಾಟಕ ರಾಜ್ಯ ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಮಾಜಿ ಶಾಸಕ ಸಿ.ರಮೇಶ್, ಕೇಂದ್ರೀಯ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಗರಪಾಲಿಕೆ ಆಡಳಿತ ನಾಯಕ ಶಿವಕುಮಾರ್, ಸದಸ್ಯರಾದ ಎಂ.ಯು.ಸುಬ್ಬಯ್ಯ, ಎಸ್.ಸಾತ್ವಿಕ್, ಬಿ.ವಿ.ಮಂಜುನಾಥ್, ಪ್ರಮೀಳಾಭರತ್, ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ, ಮುಖಂಡರಾದ ನಾಗರಾಜ್ ಮಲ್ಲಾಡಿ, ಬೋ.ಉಮೇಶ್, ಕೆ.ಸಿ.ಲೋಕೇಶ್ ನಾಯಕ, ಎಂ.ಎಸ್.ಧನಂಜಯ, ಯು.ಎಸ್.ಶೇಖರ್, ಕಾ.ಪು.ಸಿದ್ದವೀರಪ್ಪ ಶಿವರಾಮ್, ಎಂ.ಕೆ.ಶಂಕರ್, ಪರಮೇಶ್ ಗೌಡ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ವಿ.ಡಿ.ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿ ದಾನವನ್ನು ಜನರಿಗೆ ಪರಿಚಯಿಸಲು ರಥಯಾತ್ರೆಯು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ. 24ರಂದು ಎಚ್.ಡಿ.ಕೋಟೆ, ಸರಗೂರು, 25, 26ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಮೈಸೂರಿನಲ್ಲಿ 30ರಂದು ಸಮಾರೋಪಗೊಳ್ಳಲಿದೆ.