ಕಾಸರಗೋಡು: ಪಿಗ್ಮಿ ಏಜಂಟ್ ನ ದರೋಡೆಗೆ ಸಂಬಂಧಪಟ್ಟಂತೆ ಇಬ್ಬರನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮುಳಿಯಾರು ಬಾಲನಡ್ಕದ ಮುಹಮ್ಮದ್ ರಫೀಕ್ (26) ಮತ್ತು ಅಮ್ಮಂಗೋಡಿನ ನೌಫಾಲ್ ಅಲಿ (19) ಬಂಧಿತರು,ನವಂಬರ್ ನಾಲ್ಕರಂದು ಯೂನಿಯನ್ ಬ್ಯಾಂಕ್ ನ ಬೋವಿಕ್ಕಾನ ಬ್ರಾಂಚ್ ನ ಪಿಗ್ಮಿ ಏಜಂಟ್ ರಾಮಕೃಷ್ಣ ಆಚಾರಿ ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ತಂಡವು ತಲೆಗೆ ಬಡಿದು 23 ಸಾವಿರ ರೂ. ನಗದು ಹಾಗೂ ದಾಖಲೆಗಳನ್ನು ಒಳಗೊಂಡ ದರೋಡೆ ಮಾಡಿತ್ತು.
ಇದಲ್ಲದೆ ಅಕ್ಟೋಬರ್ 29 ರಂದು ರಾತ್ರಿ ಪೇರಡ್ಕದ ಸಿನೋಜ್ ರವರ ಮಾಲಕತ್ವದ ಅಂಗಡಿಗೆ ನುಗ್ಗಿ ಎರಡು ಕ್ವಿಂಟಾಲ್ ಅಡಿಕೆ ಮತ್ತು 25 ಕಿಲೋ ಕಾಳುಮೆಣಸು ಕಳವು ಗೈದ ಪ್ರಕರಣದ ಆರೋಪಿಗಳಾಗಿದ್ದಾರೆ.
ಪಿಗ್ಮಿ ಏಜಂಟ್ ನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿ ವಿಚಾರಣೆ ನಡೆಸಿದಾಗ ಅಡಿಕೆ ಮತ್ತು ಕಾಳು ಮೆಣಸು ಕಳವು ನಡೆಸಿರುವುದನ್ನು ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.