ಕಾರವಾರ: ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅವುಗಳನ್ನು ಬಗೆಹರಿಸುವ ಕ್ರಮ ಆಗಬೇಕಾಗಿದೆ ಎಂದು ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಮಹಾಪೋಷಕ, ಶಿಕ್ಷಣ ತಜ್ಞರಾದ ಪ್ರೊ. ಡಾ. ನಿರಂಜನಾರಾಧ್ಯಾ ವಿ.ಪಿ. ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಕೋವಿಡ್ ಬಳಿಕ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆ ಆಗಿರುವುದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸುತ್ತಿದೆ ಈ ಸರ್ಕಾರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಬದಲು ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿಯಲ್ಲಿದೆ ಎಂದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಗಬೇಕಾದ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ನಮ್ಮ ವೇದಿಕೆಯ ಒತ್ತಾಯಿಸಿದ ಮೇಲೆ ಅವುಗಳನ್ನು ಒದಗಿಸುವ ಬಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದರು. ಆದರೆ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ವರ್ಷ ಸೈಕಲ್ ವಿತರಣೆ ಮಾಡಲೇ ಇಲ್ಲ. ಇದಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಲಾಯಿತು. ರಾಜ್ಯದ ಕೆ.ಪಿ.ಎಸ್. ಶಾಲೆಗಳಲ್ಲಿ ಪಾಲಕರ ಪರಿಷತ್ತಿನಿಂದ ಆಯ್ಕೆಯಾದ ಪಾಲಕರ ಪ್ರತಿನಿಧಿ ಅಧ್ಯಕ್ಷರನ್ನು ಬದಲಾಯಿಸಿ, ಅಲ್ಲಿ ಶಾಸಕರನ್ನು ಅಧ್ಯಕ್ಷರಾಗಲು ಅನುಕೂಲವಾಗುವಂತೆ ಸುತ್ತೋಲೆಯನ್ನು ಮಾರ್ಪಡಿಸಿ, ಶಿಕ್ಷಣ ಕ್ಷೇತ್ರದಲ್ಲೂ ರಾಜನೀತಿ ತರಲಾಯಿತು.
ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದು ಶಾಲಾ ಶಿಕ್ಷಣವನ್ನು ಗಟ್ಟಿಗೊಳಿಸಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮನ್ವಯ ವೇದಿಕೆಯ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂದು ಪ್ರೊ. ಡಾ. ನಿರಂಜನಾರಾಧ್ಯಾ ಆಗ್ರಹಿಸಿದರು. ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸರ್ಕಾರದ ಮುಂದೆ ಶಾಲಾ ಶಿಕ್ಷಣವನ್ನು ಗಟ್ಟಿಗೊಳಿಸಲು ಆಗ್ರಹಿಸಿದೆ.