ಕಾಸರಗೋಡು: ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆ ತಂದಿದ್ದಾಗ ಮಾದಕ ವಸ್ತು ಸಾಗಟ ಪ್ರಕರಣದ ಆರೋಪಿಯೋರ್ವ ಪೊಲೀಸರಿಂದ ತಪ್ಪಿಸಿ ಪರಾರಿಯಾದ ಘಟನೆ ಬುಧವಾರ ಕಾಸರಗೋಡಿನಲ್ಲಿ ನಡೆದಿದೆ.
ಅಹಮ್ಮದ್ ಕಬೀರ್ ( ೨೫) ಪರಾರಿಯಾದ ಆರೋಪಿ. ನ್ಯಾಯಾಲಯ ಪರಿಸರ ದಲ್ಲಿನ ಕ್ಯಾಂಟೀನ್ ಗೆ ಆಹಾರ ಸೇವಿಸಲು ತೆರಳಿದ್ದ ಸಂದರ್ಭದಲ್ಲಿ ಈತ ತಪ್ಪಿಸಿ ಪರಾರಿಯಾಗಿದ್ದಾನೆ.
ಪರಾರಿಯಾದವನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ ೨೩ ರಂದು ಕಬೀರ್ ನನ್ನು ಮಾದಕ ವಸ್ತು ಸಹಿತ ಈತನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದರು. ಗೋವಾದಿಂದ ಎಂ ಡಿ ಎಂ ಎ ಮಾದಕ ವಸ್ತುವನ್ನು ಕಾಸರಗೋಡಿಗೆ ತಲಪಿಸಿ ಮಾರಾಟ ಮಾಡುವ ತಂಡದ ಸೂತ್ರದಾರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು . ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿದ್ದ ಕಬೀರ್ ನನ್ನು ಬುಧವಾರ ಕಾಸರಗೋಡಿಗೆ ಕರೆ ತಂದ ಸಂದರ್ಭದಲ್ಲಿ ಘಟನೆ ನಡೆದಿದೆ.
ತಿಂಗಳ ಹಿಂದೆ ಮಾದಕ ವಸ್ತು ಸಾಗಾಟ ಪ್ರಕರಣದ ಆರೋಪಿಯಾಗಿದ್ದ ವಿದ್ಯಾನಗರ ಠಾಣಾ ವ್ಯಾಪ್ತಿಯ ಅಮೀರ್ ಅಲಿ ( ೨೩) ಎಂಬಾತ ನ್ಯಾಯಾಲಯಕ್ಕೆ ಕರೆ ತರುತ್ತಿದ್ದಾಗ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು . ಬಳಿಕ ಈತನನ್ನು ಬೆಂಗಳೂರಿನಿಂದ ಪೊಲೀಸರು ಬಂಧಿಸಿದ್ದರು