ಕಾಸರಗೋಡು: ಕೋವಿಡ್ ನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ನಿಲುಗಡೆಗೊಂಡಿದ್ದ ಕಾಸರಗೋಡು – ಮಂಗಳೂರು ಬಸ್ ಸೇವೆ ಇಂದಿನಿಂದ (ಶುಕ್ರವಾರದಿಂದ) ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಕೇರಳದ ಎಲ್ಲಾ ಸರಕಾರಿ ಬಸ್ ಗಳು ಮಂಗಳೂರಿಗೆ ಸಂಚಾರ ನಡೆಸುತ್ತಿವೆ.
ಕೇರಳದಲ್ಲಿ ಕೊರೋನಾ ಇಳಿಮುಖವಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ ಆರ್ ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವನ್ನು ಹಿಂತೆಗೆದುಕೊಳ್ಳಲಾಗಿದೆ.
ಕಾಸರಗೋಡಿಗರು ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಾಗಿ ಮಂಗಳೂರನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಮಂಗಳೂರಿಗೆ ಬಸ್ ಸಂಚಾರ ಆರಂಭಗೊಂಡಿರುವುದು ಕಾಸರಗೋಡಿಗರಿಗೆ ಸಾಕಷ್ಟು ಅನುಕೂಲವಾಗಲಿದೆ.
ಇದೇ ವೇಳೆ ಕಾಸರಗೋಡು – ಮಂಗಳೂರು ಬಸ್ ಸಂಚಾರ ಆರಂಭಿಸಲು ಹಸಿರು ನಿಶಾನೆ ತೋರಿದ ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಕಾಸರಗೋಡು ಪ್ರಯಾಣಿಕರ ತಂಡ ಸಹಯಾತ್ರಿ , ಬಿಜೆಪಿ ಜಿಲ್ಲಾ ಸಮಿತಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ಮೊದಲಾದ ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.