News Karnataka Kannada
Friday, May 03 2024
ಕರಾವಳಿ

ಹ್ಯೂಮಾನಿಟಿ ಸಂಸ್ಥೆ, ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ ವತಿಯಿಂದ ಅಸಹಾಯಕರಿಗೆ ಮನೆ ಹಸ್ತಾಂತರ

Photo Credit :

ಹ್ಯೂಮಾನಿಟಿ ಸಂಸ್ಥೆ, ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ ವತಿಯಿಂದ ಅಸಹಾಯಕರಿಗೆ ಮನೆ ಹಸ್ತಾಂತರ

ಮೂಡುಬಿದಿರೆ: ಮುರಿದು ಬೀಳುವಂತಹ ದುಸ್ಥಿಯಲಿದ್ದ ಮುರುಕಲು ಮನೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ವೃದ್ಧ ದಂಪತಿಗೆ, ತನ್ನ ಮೂವರು ಮಕ್ಕಳೊಂದಿಗೆ ಗುಡಿಸಲಿನಲ್ಲಿ ಕತ್ತಲ ಕೋಣೆಯಲ್ಲಿ ದಿನಗಳನ್ನು ಕಳೆಯುತ್ತಿದ್ದ ವಿಧವೆಗೆ ಹಾಗೂ ಮೂಲಭೂತ ಸೌಕರ್ಯವಾಗಿರುವ ಶೌಚಾಲಯ ಮತ್ತು ಸ್ನಾನಗೃಹವಿಲ್ಲದೆ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಮನೆಯನ್ನು ನಿರ್ಮಿಸಲಾಗಿದ್ದು ಇದರ ಹಸ್ತಾಂತರ ಕಾರ್ಯಕ್ರಮವು ಸ್ವಾತಂತ್ರೋತ್ಸವ ಸುಸಂದರ್ಭವಾಗಿ ನಾಳೆ (ಆ.15ರಂದು) ನಡೆಯಲಿದೆ.

ಮೂಡುಬಿದಿರೆ ಸ್ಪೂರ್ತಿ ವಿಶೇಷ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಅವರು ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ನೀಡಲು ಮೂಡುಬಿದಿರೆ ತಾಲೂಕಿನ  ಪಾಲಡ್ಕ ಪಂಚಾಯತ್ ವ್ಯಾಪ್ತಿಗೆ ಹೋದಾಗ ಅಲ್ಲಿ ಕೇಮಾರಿನ ಸಮಾಜ ಸೇವಕ ಸುಕೇಶ್ ಶೆಟ್ಟಿ ಅವರ ಮೂಲಕ ಪಾಲಡ್ಕ ಗ್ರಾಮದ ಕೇಮಾರು ಹೋಡೇಲುವಿನ ವೃದ್ಧ ದಂಪತಿಗಳಾದ ಸುಶೀಲ-ದೂಜ ಪೂಜಾರಿ ಅವರು ಬಿದ್ದು ಹೋಗಲಿರುವ ಮುರುಕಲು ಮನೆಯಲ್ಲಿ ಜೀವನ ನಡೆಸುತ್ತಿರುವುದರ ಬಗ್ಗೆ ಅವರ ಗಮನಕ್ಕೆ ಬಂದಿತ್ತು.  ತಪಾಲಡ್ಕದ ನೆಲ್ಲಕ್ಕೆ ಕಿನ್ನಿಪದವಿನಲ್ಲಿ ಮೂಲಸೌಕರ್ಯವಿಲ್ಲದೆ ವಂಚಿತವಾಗಿರುವ ಶಾಂತಾ ನಾಯ್ಕ್ ಕುಟುಂಬ ಹಾಗೂ ಪುತ್ತಿಗೆಯ ಪೆಲತ್ತಡ್ಕದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಗುಣವತಿ ಆಚಾರ್ಯರ ಕುಟುಂಬವು ಬೆಳಕಿಗೆ ಬಂದಿತ್ತು.

ಅಸಹಾಯಕ ಪರಿಸ್ಥಿತಿಯಲ್ಲಿರುವ ಕುಟುಂಬಕ್ಕೆ ಸೂರು ಕಲ್ಪಿಸಿಕೊಡಬೇಕೆಂಬ ಛಲವನ್ನು ಹೊಂದಿದ ಪ್ರಕಾಶ್ ಶೆಟ್ಟಿಗಾರ್  ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ  ಮತ್ತು ದಾನಿಗಳ ಆರ್ಥಿಕ ಸಹಕಾರ ಪಡೆದುಕೊಂಡು ಹಾಗೂ ಮೂಡುಬಿದಿರೆಯ “ಯುವ ಮಿಲನ”ದ ರೂಪಾ ಬಳ್ಳಾಲ್ ಅವರ ತಂಡದ ಸಹಿತ ವಿವಿಧ ತಂಡಗಳ ಶ್ರಮದಾನದ ಮೂಲಕ ಪಾಲಡ್ಕದ ವೃದ್ಧ ದಂಪತಿಯ ಸೂರು ಹಾಗೂ ನೆಲ್ಲಕ್ಕೆಯ ಶಾಂತಾ ನಾಯ್ಕ್‍ಅವರ ಶೌಚಾಲಯ ಮತ್ತು ಸ್ನಾನ ಗೃಹ ಹಾಗೂ ಮನೆ ನವೀಕರಣ ಮಾಡಲಾಗಿದೆ.

 

ಹ್ಯೂಮಾನಿಟಿಯಿಂದ ಮಾನವೀಯತೆ: ಗುಣವತಿ ಆಚಾರ್ಯರಿಗೆ ಮನೆಯ ಭಾಗ್ಯ  

ಹ್ಯೂಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಅವರು ವಿವಿಧ ದಾನಿಗಳ ಸಹಕಾರವನ್ನು ಪಡೆದುಕೊಂಡು ಪುತ್ತಿಗೆಯ ಪೆಲತ್ತಡ್ಕದಲ್ಲಿರುವ ವಿಧವೆ ಗುಣವತಿ ಆಚಾರ್ಯರಿಗೆ ಸೂರು ಕಲ್ಪಿಸಿಕೊಡುವ ಕೈಂಕರ್ಯವನ್ನು ಕೈಗೊಂಡವರು. ತನ್ನ ಮೂವರು ಸಣ್ಣ ಮಕ್ಕಳೊಂದಿಗೆ ಗುಡಿಸಲಿನಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ  ಗುಣವತಿ ಆಚಾರ್ಯ ಅವರಿಗೆ ಸಹಾಯ ಮಾಡುವವರು ಯಾರೂ ಇಲ್ಲದ ಕಾರಣ ಈ ಪ್ರಾಜೆಕ್ಟನ್ನು ಕೈಗೆತ್ತಿಕೊಂಡರು. ಮನೆ ನಿರ್ಮಿಸಲು ಬೇಕಾದ ಪರಿಕರಗಳನ್ನು ಹಾಗೂ ಮನೆಗೆ ಬೇಕಾದ ವಸ್ತುಗಳನ್ನು ದಾನಿಗಳ ಸಹಕಾರದಿಂದಲೇ ಪಡೆದುಕೊಂಡು ಮನೆ ನಿರ್ಮಿಸಲಾಗಿದೆ. ಈ ಮನೆ ನಿರ್ಮಿಸುವ ಸಂದರ್ಭದಲ್ಲಿಯೂ ಪ್ರಕಾಶ್ ಶೆಟ್ಟಿಗಾರ್ ಅವರ ವಿವಿಧ ತಂಡಗಳು ಹಾಗೂ ರೂಪಾ ಬಲ್ಲಾಳ್ ಅವರ “ಯುವ ಮಿಲನ” ತಂಡ ಸಹಿತ ವಿವಿಧ ತಂಡಗಳು ಶ್ರಮದಾನವನ್ನು ಮಾಡುವ ಮೂಲಕ ದುಡಿದಿದ್ದಾರೆ.

ಇದೀಗ ಈ ಮೂರು ಪ್ರಾಜೆಕ್ಟ್ ಗಳು ಪೂರ್ಣಗೊಂಡಿದ್ದು ಶನಿವಾರ ಬೆಳಗ್ಗೆ ಪಾಲಡ್ಕ ಪಂಚಾಯತ್ ವ್ಯಾಪ್ತಿಯ ನೆಲ್ಲಕ್ಕೆ ಮತ್ತು ಕೇಮಾರಿನಲ್ಲಿ ಹಾಗೂ ಸಂಜೆ ವೇಳೆಗೆ ಪುತ್ತಿಗೆಯಲ್ಲಿ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರ ಮಾಡುವ ಮೂಲಕ ಕುಟುಂಬಗಳಿಗೆ ಬೆಳಕು ನೀಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು