ಸುಳ್ಯ: ಸುಳ್ಯ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಶೇ.60ರಷ್ಟು ಪೂರ್ಣಗೊಂಡಿದ್ದು ಉಳಿದ ಶೇ.40ನ್ನು ಕೂಡಲೇ ಪೂರ್ತಿಗೊಳಿಸುವಂತೆ ಪುತ್ತೂರು ಸಹಾಯಕ ಆಯುಕ್ತ ರಘುನಂದನ ಮೂರ್ತಿ ಸೂಚನೆ ನೀಡಿದ್ದಾರೆ.
ಮೊಬೈಲ್ ಆಪ್ ಮೂಲಕ ರೈತರ ಬೆಳೆ ಸಮೀಕ್ಷೆ ಮಾಹಿತಿ ಸಂಗ್ರಹಿಸುವ ಯೋಜನೆ ಪೂರ್ಣಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲು ಗುರುವಾರ ಸುಳ್ಯ ತಾಲೂಕು ಪಂಚಾಯಿತಿ ನಡೆದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಪ್ರಥಮವಾಗಿ ರಾಜ್ಯದಲ್ಲಿ ಬೆಳೆ ಸಮೀಕ್ಷೆ ಯೋಜನೆ ಜಾರಿ ತರಲಾಗಿದೆ. ರೈತರು ಇನ್ಮುಂದೆ ಗ್ರಾಮಕರಣಿಕರ ಕಚೇರಿಗೆ ತೆರಳಿ ಬೆಳೆ ನಮೂದಿಸಿಕೊಳ್ಳಬೇಕಿಲ್ಲ.
ತಮ್ಮ ಮೊಬೈಲ್ನಲ್ಲಿ `ಫಾರ್ಮರ್ಸ್ ಕ್ರಾಪ್ ಸರ್ವೇ’ ಆಪ್ನ ಮೂಲಕ ರೈತರೇ ಸ್ವತ: ತಾವೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ನಮೂದಿಸಬಹುದಾಗಿದೆ. ಮುಂದೆ ಸರ್ಕಾರದ ವಿವಿಧ ಅನುದಾನ ಪಡೆಯಲು ಈ ಬೆಳೆ ನಮೂದು ಕಡ್ಡಾಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಪೈಕಿ ಸುಳ್ಯ ತಾಲೂಕಿನಲ್ಲಿ ಅತ್ಯಧಿಕ 93,967 ಪಹಣಿ ಪತ್ರಗಳ ಪೈಕಿ 56092 ಪಹಣಿ ಪತ್ರಗಳಲ್ಲಿ ಇಲಾಖಾಧಿಕಾರಿಗಳ ಸಹಯೋಗದೊಂದಿಗೆ ಶೇ.60 ಬೆಳೆ ನಮೂದುಗೊಂಡಿದೆ.ಉಳಿದ ಶೇ. 40 ಭಾಗ ತ್ವರಿತಗತಿಯಲ್ಲಿ ನಡೆಸಲು ಆಪ್ ನ ವಿಷಯ ಮತ್ತು ನಮೂದಿಸುವ ಕಾರ್ಯದ ಬಗ್ಗೆ ಹೆಚ್ಚು ಪ್ರಚುರಪಡಿಸಿ ಕೃಷಿಕರಿಗೆ ಮಾಹಿತಿ ನೀಡಬೇಕಾಗಿದೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಎಂ.ಎಂ. ಗಣೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಉಪಸ್ಥಿತರಿದ್ದರು. ಸುಳ್ಯ ಕಸಬಾ ಗ್ರಾಮಕರಣಿಕ ತಿಪ್ಪೇಶಪ್ಪ ಮೊಬೈಲ್ ಮೂಲಕ ರೈತರು ಬೆಳೆ ದಾಖಲಾತಿ ಮಾಡುವ ವಿಧಾನ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಮತ್ತು ನರಿಯಪ್ಪ ಮಠದ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು ಪಾಲ್ಗೊಂಡಿದ್ದರು.