ಪುತ್ತೂರು: ಗೋವುಗಳನ್ನು ಅಕ್ರಮಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದೆ, ಗೋ ರಕ್ಷಣೆಯಲ್ಲಿ ನಿರತರಾಗಿರುವ ಅಮಾಯಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಕೇಸು ದಾಖಲಿಸಿಕೊಂಡರೆ ಹಿಂದೂ ಸಂಘಟನೆಗಳು ಒಟ್ಟಾಗಿ ತಕ್ಕ ಉತ್ತರ ನೀಡಬೇಕಾದಿತು ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬೈಂದೂರಿನಿಂದ ಸಂಪಾಜೆ ತನಕ,ಚಾರ್ಮಾಡಿಯಿಂದ ತೊಕ್ಕೊಟ್ಟು ತನಕ ಗೋವುಗಳ ಅಕ್ರಮ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಅಲ್ಲಲ್ಲಿ ಅಕ್ರಮ ಕಸಾಯಿಖಾನೆಗಳು ಎಲೆ ಎತ್ತುತ್ತಿವೆ. ಇದಕ್ಕೆ ಕಡಿವಾಣ ಹಾಕಿ, ಅವರನ್ನು ಗಡಿಪಾರು ಮಾಡುವುದು ಬಿಟ್ಟು, ಗೋವುಗಳ ರಕ್ಷಣೆ ಕೆಲಸ ಮಾಡುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡು ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಹಾಕುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಗೋವಿನ ರಕ್ಷಣೆ ಮಾಡಬೇಕೆನ್ನುವುದು ಸಂವಿಧಾನದಲ್ಲೇ ಇದೆ. ಇದೇ ವಿಚಾರವಾಗಿ ಅಕ್ರಮವಾಗಿ ಗೋ ಸಾಗಾಟ ಮಾಡುವ ವೇಳೆ ಗೋ ರಕ್ಷಣೆ ಮಾಡಲು ಹಿಂದೂ ಸಂಘಟನೆ ಕಾರ್ಯಕರ್ತರು ಮುಂದಾದರೆ ಗೋ ಸಾಗಾಟಕ್ಕೆ ಅಡ್ಡಿ ಪಡಿಸಿದ ಕೇಸು ದಾಖಲಿಸಿದರೆ ನಮ್ಮ ಆಕ್ಷೇಪವಿಲ್ಲ. ಆದರೆ ದರೋಡೆಯಂತಹ ಸುಳ್ಳು ಪ್ರಕರಣ ದಾಖಲಿಸಿದರೆ ಒಪ್ಪಲು ಸಾಧ್ಯವಿಲ್ಲ ಎಂದ ಅವರು ಈ ಕುರಿತು ಹಿಂದೂ ಸಮಾಜದ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಇಲಾಖೆ ಕ್ರಮ ಕೈಗೊಳ್ಳಬೇಕೆಂದರು.
ನಾಲ್ವರ ವಿರುದ್ಧ ಸುಳ್ಳು ಪ್ರಕರಣ ಹಿಂಪಡೆಯಬೇಕು: ಕೇರಳಕ್ಕೆ ದನಸಾಗಾಟ ಮಾಡುತ್ತಿದ್ದುದ್ದನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿ ಗೋವುಗಳ ರಕ್ಷಣೆಗೆ ಮುಂದಾದ ಹಿಂದೂ ಸಂಘಟನೆಯ ಮುಖಂಡ ಅಕ್ಷಯ್ ರಜಪೂತ್ ಮತ್ತು ಮೂವರ ವಿರುದ್ದ ಬದಿಯಡ್ಕ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸುಳ್ಳು ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ಮುರಳಿಕೃಷ್ಣ ಹಸಂತಡ್ಕ ಆಗ್ರಹಿಸಿದರು.
ಪೊಲೀಸ್ ಎಫ್.ಐ.ಆರ್ ನಲ್ಲಿ ದೋಷ: ಜೋಕಟ್ಟೆಯಲ್ಲಿರುವ ಅನಧಿಕೃತ ಕಸಾಯಿಖಾನೆಯಲ್ಲಿ 200ಕೆಜಿ ದನದ ಮಾಂಸ ಹಾಗೂ ಹಸುಗಳು ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಳ್ಳಲಾದ ಹಸುಗಳನ್ನು ನ್ಯಾಯಾಲಯದ ಮೂಲಕ ಬಿಡಿಸಿಕೊಳ್ಳುತ್ತಾರೆ ಎಂದಾದರೆ ಪೊಲೀಸ್ ಎಫ್ಐಆರ್ನಲ್ಲಿ ದೋಷವಿದೆ ಎಂದರ್ಥ ಎಂದ ಅವರು ಪಶುಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಅನಧಿಕೃತ ಕಸಾಯಿಖಾನೆಯಿಂದ ವಶಪಡಿಸಿಕೊಳ್ಳಲಾದ ಗೋವುಗಳನ್ನು ಹೇಗೆ ಬಿಡಿಸಿಕೊಂಡರೆಂಬ ಕುರಿತು ಸ್ಪಷ್ಟಪಡಿಸಬೇಕು ಎಂದು ಮುರಳಿಕೃಷ್ಣ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಸತೀಶ್, ಜಿಲ್ಲಾ ಸಮಿತಿಯ ಕಾನೂನು ಸಲಹೆಗಾರ ಮಾಧವ ಪೂಜಾರಿ, ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ತಾಲೂಕು ಸಂಯೋಜಕ ಹರೀಶ್ಕುಮಾರ್ ಉಪಸ್ಥಿತರಿದ್ದರು.