ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಕುಟುಂಬ ಕಲ್ಯಾಣ ಸಮಿತಿಯನ್ನು ರಚಿಸಿದ್ದು ನಿವೃತ್ತ ಸರ್ಕಾರಿ ವಕೀಲ ಶಿರಸಿಯ ಶ್ರೀಕಾಂತ ಹೆಗಡೆ ಅವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಹೇಳಿದರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಸದಸ್ಯರಾಗಿ ಸಾಮಾಜಿಕ ಕಾರ್ಯಕರ್ತೆ ಹೇಮಲತಾ ಹಾಗೂ ವಕೀಲೆ ಸಂಧ್ಯಾ ತಳೇಕರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಹೈಕೋರ್ಟ್ ಪ್ರತಿ ಜಿಲ್ಲೆಯಲ್ಲಿ ಈ ಸಮಿತಿಯನ್ನು ರಚನೆ ಮಾಡುವಂತೆ ಆದೇಶಿಸಿದ್ದು ಅಗತ್ಯವಿದ್ದಲ್ಲಿ ಎರಡು ಸಮಿಯ ರಚನೆಗೆ ಅದು ಅವಕಾಶ ನೀಡಿದೆ. ಇನ್ನುಮುಂದೆ ಭಾರತೀಯ ದಂಡ ಸಂಹಿತೆ ಕಲಂ ೪೯೮ ಹಾಗೂ ೪೯೮ (ಎ) ಅಡಿ ಠಾಣೆಯಲ್ಲಿ ದಾಖಲಾಗುವ ಕೌಟುಂಬಿಕ ಪ್ರಕರಣಗಳ ಪ್ರಾಥಮಿಕ ವರದಿಯನ್ನು ೨೪ ಗಂಟೆಯ ಒಳಗೆ ಪೊಲೀಸರು ಈ ಸಮಿತಿಗೆ ಸಲ್ಲಿಸುತ್ತಾರೆ. ಆ ವರದಿಯ ಅನ್ವಯ ಸಮಿತಿಯು ಪತಿ- ಪತ್ನಿಯ ಜೊತೆ ಸಭೆಯೊಂದನ್ನು ನಡೆಸಿ, ಒಂದು ತಿಂಗಳ ಒಳಗೆ ಅವರ ನಿರ್ಣಯಗಳನ್ನು ಪೊಲೀಸರಿಗೆ ಸಲ್ಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ವಿವರಿಸಿದರು.
ದಾಂಪತ್ಯದಲ್ಲಿನ ವೈಮನಸ್ಸಿನಿಂದಾಗಿ ಇತ್ತೀಚಿಗೆ ಸುಳ್ಳು ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಪೊಲೀಸರು ಪ್ರಮುಖ ಆರೋಪಿಯೊಂದಿಗೆ ಅವರ ಕುಟುಂಬದವರನ್ನು ಬಂಧಿಸುತ್ತಿದ್ದಾರೆ. ಹೀಗಾಗಿ ಇದನ್ನು ತಡೆಯಲು ಹಾಗೂ ರಾಜಿ ಸಂಧಾನದಲ್ಲಿ ಪ್ರಕರಣ ಬಗೆಹರಿಸುವುದಕ್ಕಾಗಿ ಈ ಸಮಿತಿ ರಚನೆಗೊಂಡಿದೆ ಎಂದರು.