ಪುತ್ತೂರು: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆರ್ಥಿಕ ಅವಲಂಬನೆಯನ್ನು ಒಳಗೊಂಡಿರುವ ಅಡಿಕೆ ಬೆಳೆ ಶೇ.80ರಿಂದ 95ರಷ್ಟು ಸಂಪೂರ್ಣ ಹಾನಿಯಾಗಿದೆ. ಇದರ ಜೊತೆಗೆ ತೆಂಗಿಗೆ ಕೂಡಾ ಕೊಳೆರೋಗ ಕಾಡಿದೆ. ಸರಕಾರ ಬೆಳೆ ಯೋಜನೆ ಪರಿಹಾರದಲ್ಲಿ ಅರ್ಜಿಗಳನ್ನು ಪಡೆದು ಕೊಂಡು ಒಂದೂವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ನ.19ಕ್ಕೆ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಬೇಡಿಕೆಗಳನ್ನು ಆದರಿಸಿ ಪ್ರತಿಭಟನೆಯ ಮುಂದಿನ ಭಾಗವಾಗಿ ನ.30ಕ್ಕೆ ದೆಹಲಿಯಲ್ಲಿ ನಡೆಯುವ ರೈತ ಸಂಸತ್ಗೆ ಭಾಗವಹಿಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕುಜುಂಬೆಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಮ್ಮ ಸ್ಥಳೀಯ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ರಬ್ಬರ್, ಭತ್ತ, ವೆನಿಲ್ಲಾ ಮುಂತಾದ ಬೆಳೆಗಳ ವರ್ಷದ ಫಸಲಂತೂ ರೈತರಾದ ನಾವು ಸಂಪೂರ್ಣವಾಗಿ ಕಳಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಪಡೆದಿರುವ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸುತ್ತೆವೆ. ಜೊತೆಗೆ ಕೃಷಿ ಬೆಳೆ ಆಯೋಗದಿಂದ ಬೆಳೆ ನಿಗದಿ ಪಡಿಸಿದ ಖರೀದಿ ಕೇಂದ್ರಗಳನ್ನು ಇಟ್ಟುಕೊಂಡು ನ.19ರಂದು ವಿಧಾನಸೌಧ ಮುತ್ತಿಗೆ ಹಮ್ಮಿಕೊಂಡಿದ್ದೇವೆ ಎಂದ ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳು ಪ್ರಮಾಣ ವಚನ ಮಾಡುವ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಕೇವಲ ರೂ. 1ಲಕ್ಷ ಸಾಲ ಮನ್ನಾ ಮಾಡುವ ಮೂಲಕ ರೈತರ ಕಣ್ಣೋರೆಸುವ ತಂತ್ರ ಮಾಡಿದ್ದಾರೆ. ನಮಗೆ ರೈತರ ಸಾಲಾ ಸಂಪೂರ್ಣ ಮನ್ನಾ ಮಾಡಬೇಕು ಮತ್ತು ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ದೇಶದ 204 ರೈತ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯುವ ರೈತ ಸಂಸತ್ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 50 ಜನ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ರೂಪೇಶ್ ಅಲಿಮಾರ್, ಜಿಲ್ಲಾ ಖಜಾಂಜಿ ಇಬ್ರಾಹಿಂ ಖಲೀಲ್, ಉಪಾಧ್ಯಕ್ಷ ಮಂಜುನಾಥ್ ಪರಾರಿಯವರು ಉಪಸ್ಥಿತರಿದ್ದರು.