ಮಂಗಳೂರು : ಕೆಲವು ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಮೂಡಿರುವ ಚಂಡಮಾರುತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿರುವುದರಿಂದ ರಾಜ್ಯ ಸರ್ಕಾರ ರಕ್ಷಣಾ ಕಾರ್ಯಚರಣೆಗೆ ನೌಕಾ ಸೇನಾ ಹೆಲಿಕಾಪ್ಟರ್ ಬಳಸಲು ಅನುಮತಿ ನೀಡಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಹಿತಿ ನೀಡಿದ್ದಾರೆ.
ಕಾಪು ಕಡಲ ತೀರದಿಂದ 15 ನಾಟೆಕಲ್ ಮೈಲ್ ದೂರದಲ್ಲಿರುವ ಟಗ್ ಕೋರಮಂಡಲ್ ಎಂಬ ಹೆಸರಿನ ಟಗ್ ನಲ್ಲಿರುವ 9 ಕಾರ್ಮಿಕರುಕಲ್ಲು ಬಂಡೆಗೆ ಸಿಲುಕಿಹಾಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದು, ನೌಕಾಪಡೆಯ ಸಹಾಯ ಪಡೆಯಲಾಗುತ್ತಿದೆ.
ಭಾರೀ ಅಲೆಗಳ ಅಬ್ಬರದಿಂದ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ಮಾಡಲು ವಿಳಂಬವಾಗುತ್ತಿದೆ. ನೌಕಾಪಡೆಯ ಹೆಲಿಕಾಪ್ಟರ್ ಬಳಸಿ ಕಾರ್ಮಿಕರ ರಕ್ಷಣೆಗೆ ಸಿದ್ದತೆ ನಡೆಸಲಾಗುತ್ತದೆ. ಕಾರವಾರದ ನೌಕಾ ನೆಲೆಯಿಂದ ಮಂಗಳೂರಿಗೆ ಹೆಲಿಕಾಪ್ಟರ್ ಬರಲಿದೆ. ಸದ್ಯ ವಿಪರೀತ ಗಾಳಿಯಿದ್ದು,ಗಾಳಿಯ ವೇಗ ಕಡಿಮೆಯಾದ ಬಳಿಕ ಹೆಲಿಕಾಪ್ಟರ್ ಬಳಸಿ ರಕ್ಷಣೆ ಕಾರ್ಯಚರಣೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.