ಬಂಟ್ವಾಳ : ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಸಂಬಂಧಿಸಿ ಅವರ ತಂದೆ ತನಿಯಪ್ಪ ಮಡಿವಾಳ ಅವರು ಈ ಕೊಲೆಯನ್ನು ಸಚಿವ ಬಿ.ರಮಾನಾಥ ರೈ ಮತ್ತು ಅವರ ಬೆಂಬಲಿಗರ ತಂಡ ನಡೆಸಿದೆ ಎಂದು ಕೆಲ ಸಮಯದ ಹಿಂದೆ ಆರೋಪಿಸಿದ್ದರು. ಇದರಿಂದ ಮನನೊಂದಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶನಿವಾರ ಕಾರಣಿಕದ ಕ್ಷೇತ್ರ ಶ್ರೀ ನಾಲ್ಕರ್ ದೈವಸ್ಥಾನ ಕಾಣತ್ತೂರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ವಿನಾಕಾರಣ ನನ್ನ ಹೆಸರನ್ನು ಬಳಸಿ ಅಪಪ್ರಚಾರ ನಡೆಸಲಾಗಿದೆ.
ಇದರಿಂದ ಮಾನಸಿಕವಾಗಿ ನನಗೆ ತೀವ್ರ ನೋವಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಬೇಕು.
ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವವರನ್ನು ಕರೆದು ವಿಚಾರಣೆ ನಡೆಸಬೇಕು ಎಂದು ಬಿ.ರಮಾನಾಥ ರೈಯವರು ದೈವಸ್ಥಾನದ ಪ್ರಮುಖರಲ್ಲಿ ವಿನಂತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತು ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಡಿಸಿಸಿ ಉಪಾಧ್ಯಕ್ಷ ಬೇಬಿ ಕುಂದರ್,ಕೆ.ಮಾಯಿಲಪ್ಪ ಸಾಲ್ಯಾನ್ ಮೊದಲಾದವರಿದ್ದರು.