ಬಿಜೆಪಿ ಮುಖಂಡರುಗಳು ವಾಮಾಚಾರ ಮಾಡುವ ಹಾಗೂ ಮತದಾರರಿಗೆ ಹಣ ಹಂಚುವ ಮೂಲಕ ನನ್ನನ್ನು ಸೋಲಿಸುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಇದು ಫಲಿಸದು ಎಂದು ಶಾಸಕ, ಕಾಂಗ್ರೇಸ್ ಅಭ್ಯರ್ಥಿ ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.
ತಾಲೂಕಿನ 81 ಗ್ರಾಮಗಳಿಗೂ ವಿದ್ಯುತ್ ಸಂಪರ್ಕ, ಗ್ರಾಮೀಣ ರಸ್ತೆಗಳ ನವೀಕರಣ, ಹಲವೆಡೆ ಕಾಂಕ್ರೀಟಿಕರಣಗೊಂಡ ರಸ್ತೆಗಳು, ಹಲವಾರು ಬೃಹತ್ ಸೇತುವೆಗಳ ನಿರ್ಮಾಣ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, 35,000 ಸಾವಿರ ಬಡಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ, 94ಸಿಸಿಯಲ್ಲಿ ಹಕ್ಕು ಪತ್ರ ವಿತರಣೆ, ಎಲ್ಲಕ್ಕಿಂತ ಮುಖ್ಯವಾಗಿ ಜನತೆಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧದ ನಿರ್ಮಾಣ, ಎಂಡೋ ಪೀಡಿತರಿಗೆ ಪುನರ್ವಸತಿ ಕೇಂದ್ರಗಳು, ತಾಲೂಕಿನಲ್ಲಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ನೀಡದೆ ಕೋಮು ಸೌಹಾರ್ದ ಕಾಪಾಡಿರುವುದು. ಒಟ್ಟಾರೆ ನನ್ನ ಅವಧಿಯಲ್ಲಿ ತಾಲೂಕಿನ ಜನತೆ ಶಾಂತಿ, ಸೌಹಾರ್ದತೆಯಿಂದ, ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ ಎಂದರು.
ಸುಮಾರು 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯನ್ನು ಇಟ್ಟುಕೊಂಡಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಬಡವರ ಸೇವೆ ಮಾಡಿದ್ದೇನೆ. 5 ಬಾರಿ ಜನ ನನ್ನನ್ನು ಶಾಸಕನನ್ನಾಗಿ ಮಾಡಿರುವುದು ಇದಕ್ಕೆ ಸಾಕ್ಷಿ. ಅಲ್ಲದೆ ಅತೀ ಹೆಚ್ಚು ಅನುದಾನ ತರಿಸಿಕೊಂಡು ವಿವಿಧ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಎಂಡೋ ಪೀಡಿತರಿಗೆ ಪುನರ್ವಸತಿ, ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಉಜಿರೆಯ ಪುನರ್ವಸತಿ ಕೇಂದ್ರ ಉದ್ಘಾಟನೆಯಾಗಲು ಬಾಕಿ ಇದ್ದು ಅದು ಮುಂದಿನ ಅವಧಿಯಲ್ಲಿ ಕಾರ್ಯಾಚರಿಸುವಂತೆ ಮಾಡಲಾಗುವುದು. ಹೊಸಂಗಡಿ, ಕಾಶಿಪಟ್ಣ, ಕುವೆಟ್ಟು, ಬೆಳ್ತಂಗಡಿ ಪ.ಪಂ. ಸೇರಿದಂತೆ ತಾಲೂಕಿನಾದ್ಯಂತ ಸ್ವಚ್ಛತೆಗೆ ಆದ್ಯತೆ ನೀಡಿದ್ದೇನೆ. ಹೀಗಾಗಿ ಈ ಬಾರಿಯೂ ಮತದಾರರು ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ರಾಜಕೀಯದ ಯಾವುದೇ ಅನುಭವವಿಲ್ಲದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಜನತೆ ಆರಸಿ ಕಳುಹಿಸಿದರೆ ತಾಲೂಕಿನ ಗತಿಯೇನು ಎಂಬ ಚಿಂತೆ ಇದೆ. ಅವರಿಗೆ ಪಂಚಾಯತ್ ಸದಸ್ಯರಿಗಿರುವಷ್ಟೂ ಅನುಭವವಿಲ್ಲ. ಗೆಲ್ಲಲು ವಾಮಾಚಾರದಂತಹ ಕೆಟ್ಟ, ಅಡ್ಡ ದಾರಿ ಹಿಡಿದಿದ್ದಾರೆ. ಹಣದ ವಿತರಣೆ ಬಹಳಷ್ಟು ಕಡೆ ಮಾಡಿದ್ದಾರೆ ಎಂದು ಆರೋಪಿಸಿದರು
ಉಜಿರೆಯಿಂದ ಗುರುವಾಯನಕೆರೆ ತನಕದ ರಸ್ತೆಯಲ್ಲಿ ವಾಹನ ಸಂಚಾರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಪ್ರಮುಖವಾಗಿ ಈ ರಸ್ತೆ ದ್ವಿಪಥವಾಗಲು ಶ್ರಮಿಸುತ್ತೇನೆ. ಬೈಪಾಸ್ ರಸ್ತೆ ಸರ್ವೇ ನಡೆದಿದೆ. ನಿಡಿಗಲ್ ನಲ್ಲಿ 18 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣವಾಗುತ್ತಿದೆ ಎಂದ ಅವರು, ನಮ್ಮ ತಾಲೂಕು ಬಡತನ ಮುಕ್ತ ತಾಲೂಕು ಆಗಬೇಕಲ್ಲದೆ, ಇನ್ನು ಹೆಚ್ಚು ಅನುದಾನ ತರಿಸಿಕೊಂಡು ಉಳಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದೇನೆ ಎಂದರು.