ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅರ್ಚನಾ ಅವರನ್ನು ಜಿ. ಪಂ ಅಧ್ಯಕ್ಷರು ಸಾರ್ವಜನಿಕವಾಗಿ ತರಾಟೆಗೆತ್ತಿಕೊಂಡ ಘಟನೆಗೆ ಸಂಬಂಧಿಸಿ ಜೂ. 30ರಂದು ಡಾ. ಅರ್ಚನಾ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದಂತೆ ಪೊಲೀಸರು ಜು.1ರಂದು ಸಂಜೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ನೀಡಿದಂತೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಆಸ್ಪತ್ರೆಗೆ ಆಗಮಿಸಿ ಡಾ. ಅರ್ಚನಾ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಇದರ ಜೊತೆಗೆ ಅವರ ಹಿಂಬಾಲಕರು ವೈದ್ಯರನ್ನು ತರಾಟೆಗೆತ್ತಿಕೊಂಡ ವಿಡಿಯೋ ಚಿತ್ರೀಕರಣ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ ಮಾನಹಾನಿ ಮಾಡಿದ್ದು ಈ ಕುರಿತು ಪ್ರಕರಣ ದಾಖಲಿಸಲು ಕೋರಿಕೊಂಡಿದ್ದರು. ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಸೇಸಮ್ಮ ಅವರು ದೂರು ಸ್ವೀಕರಿಸಿ ಮೇಲಾಧಿಕಾರಿಗಳ ಸಲಹೆಯಂತೆ ಜಿ.ಪಂ ಅಧ್ಯಕ್ಷರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಸೆಕ್ಷನ್ 353 ಮತ್ತು ವೈದ್ಯರನ್ನು ತರಾಟೆಗೆತ್ತಿಕೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ವಿಚಾರದಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.