ಬೆಳ್ತಂಗಡಿ: ಮುಂದಿನ ದಿನಗಳಲ್ಲಿ ಬರುವ ವಿವಿಧ ಹಿಂದೂ ಉತ್ಸವಗಳನ್ನು ಒಂದೇ ದಿನದಲ್ಲಿ ಹಾಗು ನಿಯಮಿತ ಸಂಖ್ಯೆಯಲ್ಲಿ ಮಾತ್ರ ಮಾಡುವ ನಿರ್ಣಯಕ್ಕೆ ಮಂಗಳವಾರ ಇಲ್ಲಿನ ಕಲಾಭವನದಲ್ಲಿ ನಡೆದ ವರಮಹಾಲಕ್ಷ್ಮೀ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀಗಣೇಶೋತ್ಸವ ಸಮಿತಿ, ಶಾರದಾ ಪೂಜಾ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊರೋನಾ ಮಹಾಮಾರಿಯ ಮೂರನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಉತ್ಸವಗಳನ್ನು ಜನತೆಯ ಆರೋಗ್ಯದ ಹಾಗೂ ಸರಕಾರದ ನಿಯಮಾವಳಿಗಳಂತೆ ನಡೆಸಲು ತೀರ್ಮಾನಿಸಲಾಯಿತು.
ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಶಾಸಕ ಹರೀಶ್ ಪೂಂಜ ಅವರು, ಕೊರೋನಾ ತಡೆಗಟ್ಟುವ ಉದ್ದೇಶದಿಂದ ಎಲ್ಲಾ ಉತ್ಸವಗಳನ್ನು ಕಳೆದ ವರ್ಷದ ಮಾದರಿಯಲ್ಲಿಯೇ ಒಂದೇ ದಿನಕ್ಕೆ ಸೀಮಿತಗೊಳಿಸುವ, ಪೂಜೆಗೆ ಮಾತ್ರ ಅವಕಾಶ ನೀಡುವ ನಿರ್ಧಾರಕ್ಕೆ ಬಂದರು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಮೆರವಣಿಗೆಗೆ, ಪೆಂಡಾಲ್ ಹಾಕಲು ಅವಕಾಶ ಇಲ್ಲ. ಅನ್ನ ಸಂತರ್ಪಣೆ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಲಿದೆ ಎಂದರು.
ಕೊರೋನಾ ಇರಲಿ, ಇಲ್ಲದಿರಲಿ ಪ್ರತಿ ವರ್ಷ ಇದೇ ರೀತಿಯ ಸಭೆಗಳನ್ನು ನಡೆಸುತ್ತಾ ಬಂದಲ್ಲಿ ಎಲ್ಲಾ ಉತ್ಸವಗಳನ್ನು ಶಿಸ್ತಿನಲ್ಲಿ, ಏಕರೂಪದಲ್ಲಿ ನಡೆಸಲು ಸಾಧ್ಯವಾಗಲಿದೆ – ಹರೀಶ ಪೂಂಜ
ವಿ.ಹಿಂ.ಪ. ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕಾರ್ಯದರ್ಶಿ ನವೀನ್ ನೆರಿಯ, ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಶ್ರೀನಿವಾಸ ಧರ್ಮಸ್ಥಳ, ರಾಜೇಶ್ ಪೆರ್ಬುಡ,
ನೂರಕ್ಕೂ ಹೆಚ್ಚು ಮಂದಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.