ಬೆಳ್ತಂಗಡಿ: ಕಳೆದ ಮೂರು ವರ್ಷಗಳಲ್ಲಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು ರಾಜ್ಯಕ್ಕೇ ಮಾದರಿ ಎನಿಸುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ಅವರು ಮಂಗಳವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಸಕರ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವಿಶ್ಲೇಷಿಸಿದರು.
ಕೇಂದ್ರ ಸರಕಾರದ ಎರಡನೇ ಅವಧಿ, ರಾಜ್ಯ ಬಿಜೆಪಿ ಸರಕಾರದ ಎರಡನೇ ವರ್ಷ ಹಾಗೂ ಶಾಸಕರ ಮೂರನೇ ವರ್ಷದಲ್ಲಿ ಬಿಜೆಪಿಯ ಅಭಿವೃದ್ಧಿಯೇ ಮಂತ್ರ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಸಬ್ಕಾ ಸಾಥ್, ಸಬ್ಕಾ ವಿಶ್ವಾಸ ಎಂಬ ಘೋಷಣೆಯಂತೆ ಶಾಸಕರು ಸ್ವಜನ ಪಕ್ಷಪಾತಕ್ಕೆ ಅವಕಾಶವಿಲ್ಲದೆ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಪರ್ವವನ್ನೇ ಮಾಡಿದ್ದಾರೆ ಎಂದರು.
ಪ್ರಾರಂಭದ ಹಂತದಲ್ಲಿ ಬಂದ ಭೀಕರ ನೆರೆ, ಬಳಿಕ ಬಂದ ಕೊರೋನಾದ ಎರಡು ಅಲೆಗಳ ಸಂದರ್ಭ ಧರ್ಮಸ್ಥಳ ಹೆಗ್ಗಡೆಯವರ ಸಹಕಾರದಿಂದ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ, ಜನರನ್ನು ಹುರಿದುಂಬಿಸಿ , ನೊಂದವರಿಗೆ ಮತ್ತೆಬದುಕು ಕಟ್ಟಲು ನೆರವಾಗಿರುವುದು ಅಸಮಾನ್ಯ ಸಾಧನೆಯಾಗಿದೆ. ಇವರ ಸಮರ್ಥ ಕಾರ್ಯಶೈಲಿಗೆ ಬಿಜೆಪಿ ಅವರನ್ನು ಅಭಿನಂದಿಸುತ್ತದೆ ಎಂದರು.
ದೂರದೃಷ್ಟಿಯುಳ್ಳ ಯೋಜನೆಗಳನ್ನು ತಂದು ಅದನ್ನು ವ್ಯವಸ್ಥಿತವಾಗಿ ಹೇಗೆ ಅನುಷ್ಠಾನಗೊಳಿಸಬೇಕು ಎಂಬುದನ್ನು ಪೂಂಜರಿಂದ ಅರಿಯಬೇಕು. ಹಿಂದೆ ನೀರಿನ ಲಭ್ಯತೆಯನ್ನು ಗುರುತಿಸದೆ ಯೋಜನೆಗಳನ್ನು ಮಾಡುತ್ತಿದ್ದರಿಂದ ಅವು ಫಲ ನೀಡುತ್ತಿರಲಿಲ್ಲ.ಆದರೆ ಇಲ್ಲಿನ ಶಾಸಕರು ನೀರಾವರಿಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 28 ವೆಂಟೆಡ್ ಅಣೆಕಟ್ಟುಗಳನ್ನು ನಿರ್ಮಿಸಿರುವುದು ತಾಲೂಕಿನಲ್ಲಿ ಮಾತ್ರ. ಇದರಿಂದ 94 ಕಿ.ಮೀ. ವ್ಯಾಪ್ತಿಯಲ್ಲಿ ನೀರು ನಿಲ್ಲುವುದರಿಂದ ಮುಂದಿನ ವರ್ಷಗಳಲ್ಲಿ ಅಂತರ್ಜಲ ಹೆಚ್ಚಬಲ್ಲುದು. ಇದರಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ಕೊನೆಯಾಗಲಿದೆ. ಕೆಲ ದಿನಗಳ ಹಿಂದೆ ಏತ ನೀರಾವರಿ ಯೋಜನೆಗೆ 240 ಕೋಟಿ ರೂ. ಕ್ಯಾಬಿನೆಟ್ ಮಂಜೂರಾತಿ ನೀಡಿದೆ. ಇದರಿಂದ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪ್ರವಾಸೋದ್ಯಮಕ್ಕೂ ನೆರವಾಗಲಿದೆಯಲ್ಲದೆ ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಗೆ ಬಲ ಬರಲಿದೆ ಎಂದರು.
ಎಂ.ಆರ್.ಪಿ.ಎಲ್.ನ ಸಿ.ಎಸ್.ಆರ್.ಫಂಡ್ ಮೂಲಕ ಸುಮಾರು ಐದೂವರೆ ಕೋಟಿ ವೆಚ್ಚದಲ್ಲಿ ತಾಲೂಕಿನ ಹಲವಾರು ಶಾಲೆಗಳಲ್ಲಿ ಶೌಚಾಲಯ ಇರುವಂತೆ ಮಾಡಿದ್ದಾರೆ ಶಾಸಕರು. ಹೀಗೆ ತಾಲೂಕಿನ 241 ಬೂತ್ಗಳಲ್ಲಿ ರಸ್ತೆ, ನೀರಾವರಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಶಾಸಕರು ಜನರ ಹತ್ತಿರ ತಲುಪಿದ್ದಾರೆ, ಇನ್ನೂ ತಲುಪಲಿದ್ದಾರೆ ಎಂದರು.
ಶಾಸಕರ ಮುಂದಿನ ಯೋಜನೆಗಳು
* ರೂ. 15 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆಯನ್ನು ಸುಂದರಗೊಳಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ.
* ಈಗಾಗಲೇ 28 ಎಕರೆ ಜಾಗದಲ್ಲಿ ಬೆಳ್ತಂಗಡಿ ಸನಿಹ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣಗೊಂಡಿದ್ದು ಅಲ್ಲಿನ ಸುಂದರತೆಗೆ ಒತ್ತು.
* ಉಜಿರೆಯ ನಿನ್ನಿಕಲ್ಲು ಎಂಬಲ್ಲಿ 100 ಎಕರೆ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ ಅನುಷ್ಠಾನ
* ಪಂ.ಗಳಲ್ಲಿರುವ ತ್ಯಾಜ್ಯ ಘಟಕಗಳನ್ನು ಕಲ್ಮಶವಿಲ್ಲದ, ದುರ್ಗಂಧ ಬಾರದ ರೀತಿಯಲ್ಲಿ ಪರಿವರ್ತನೆ
* ಬೆಳ್ತಂಗಡಿ ಸರಕಾರಿ ಶಾಲೆಗೆ ದೊಡ್ಡ ರೂಪ ಕೊಡುವುದು.
ಮಾಜಿ ಶಾಸಕ ವಸಂತ ಬಂಗೇರ ಅವರು ಶಾಸಕರ ಯೋಜನೆಗಳ ಬಗ್ಗೆ ಆಗ್ಗಾಗ್ಗೆ ಲೆಕ್ಕ ಕೇಳುವುದರ ವಿಚಾರವಾಗಿ ಪ್ರತಾಪ್ ಅವರು, ಅವರಿಗೆ ಲೆಕ್ಕ ಕೊಟ್ಟು, ಕೊಟ್ಟು ಸಾಕಾಗಿದೆ. ಅವರಿಗೆ ಅರ್ಥವಾಗುವುದಿಲ್ಲ ಎಂಬುದು ನಮಗೆಲ್ಲರಿಗೂ ಮನವರಿಕೆಯಾಗಿದೆ. ನಿದ್ದೆ ಬಂದವರನ್ನಾದರೂ ಎಬ್ಬಿಸಬಹುದು, ಆದರೆ ನಿದ್ದೆ ಬಂದಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟ. ಹೀಗಾಗಿ ಅವರಿಗೆ ಲೆಕ್ಕ ಕೊಟ್ಟು ಪ್ರಯೋಜನವಿಲ್ಲಾ. ಸಲಹಾ ಸಮಿತಿಯವರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಯಾವುದೇ ನಕಾರಾತ್ಮಕ, ಭಾವನಾತ್ಮಕ ತಂತ್ರಗಳನ್ನು ಪ್ರಯೋಗಿಸದೆ, ಕೇವಲಅಭಿವೃದ್ಧಿಯ ಆಧಾರದ ಮೇಲೆ ಕೇಂದ್ರದಲ್ಲಿ ಬಿಜೆಪಿ ಎರಡು ಬಾರಿ ಗೆದ್ದಿದೆ. ಇದೀಗ ರಾಜ್ಯದಲ್ಲೂ ಬಿಜೆಪಿ ಇದ್ದು ಡಬಲ್ ಇಂಜಿನ್ ಹೊಂದಿದೆ. ತಾಲೂಕಿನಲ್ಲಿ ಈ ಹಿಂದೆ ಪ್ರಭಾಕರ ಬಂಗೇರ ಅವರು ಎರಡು ಬಾರಿ ಬಿಜೆಪಿ ಶಾಸಕರಾಗಿ ತನ್ನದೇ ಆದ ರೀತಿಯಲ್ಲಿ ಸೌಮ್ಯವಾಗಿ ಶಾಸಕತ್ವನ್ನು ನಿಭಾಯಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಹಿಂದೆಂದೂ ಕಾಣದ ವೇಗ ಬಂದಿದೆ. ಪ್ರತಿಪಕ್ಷದವರು ಮೊಸರಲ್ಲಿ ಕಲ್ಲುಹುಡುಕುವ ಪ್ರಯತ್ನ ಮಾಡುತ್ತಾ ಅಭಿವೃದ್ಧಿಯ ವೇಗವನ್ನು ಕುಂಠಿತಗೊಳಿಸುವುದನ್ನು ನಿಲ್ಲಿಸಿದರೆ ಒಳಿತು – ಪ್ರತಾಪ್
ಗೋಷ್ಠಿಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಮಾಜಿ ಮಂಡಲಾಧ್ಯಕ್ಷರುಗಳಾದ ಕುಶಾಲಪ್ಪ ಗೌಡ, ಬಾಲಕೃಷ್ಣ ಶೆಟ್ಟಿ ಇದ್ದರು.