ಉಳ್ಳಾಲ: ರೈಲ್ವೇ ಹಳಿಯಲ್ಲಿ ಯುವಕನೋರ್ವ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದ್ದು, ಸ್ಥಳೀಯರು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದೊಂದು ಕೊಲೆ ಎಂದು ಮೃತನ ಸಹೋದರಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಲ್ಯ ಕನೀರುತೋಟ ನಿವಾಸಿ ನಿತೇಶ್ ಶೆಟ್ಟಿ (27) ನಿಗೂಢವಾಗಿ ಸಾವನ್ನಿಪ್ಪಿದವರು. ಭಾನುವಾರ ಮಧ್ಯಾಹ್ನ ವೇಳೆ ನಿತೇಶ್ ತೊಕ್ಕೊಟ್ಟು ಬಾರೊಂದರ ಹಿಂದುಗಡೆಯ ರೈಲ್ವೇ ಹಳಿಯಲ್ಲಿ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಕಂಡು 108 ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ನಿತೇಶ್ ಸಂಜೆ ವೇಳೆ ಕೊನೆಯುಸಿರೆಳೆದಿದ್ದರು.
ಅಲ್ಲಲ್ಲಿ ಗಾಯದ ಗುರುತುಗಳು: ಆಸ್ಪತ್ರೆಯಲ್ಲಿ ನಿತೇಶ್ ಮಾತನಾಡದೇ ಕೈಕಾಲು ಅಲ್ಲಾಡಿಸುತ್ತಿದ್ದರು. ಬಲಗೈ ಮುರಿತಕ್ಕೊಳಗಾದ ಸ್ಥಿತಿಯಲ್ಲಿದ್ದರೆ ಕೆಳ ತುಟಿ, ಬಲ ಪಕ್ಕೆಯ ಬದಿಯಲ್ಲಿ, ಕಾಲುಗಳಲ್ಲಿ ಗಂಭೀರ ಗಾಯಗಳು ಹಾಗೂ ದೇಹದ ಅಲ್ಲಲ್ಲಿ ತರಚಿದ ಗಾಯಗಳಿತ್ತು.
ಮೂವರ ಹೆಸರು ಹೇಳಿದ್ದ: ಅರೆ ಪ್ರಜ್ಞೆ ಸ್ಥಿತಿಯಲ್ಲಿದ್ದ ನಿತೇಶನನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಅಲ್ಲಿ ನೋಂದಾವಣೆಗೆ ಹೆಸರು ಕೇಳಿದಾಗ ದಿನೇಶ್ ಮತ್ತು ಅವಿನಾಶ್ ಎಂದು ಹೇಳಿದ್ದರು. ಅದರಂತೆ 108 ಸಿಬ್ಬಂದಿ ಅದೇ ಹೆಸರಿನಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಸರು ದಾಖಲಿಸಿದ್ದರು. ನಂತರ ನಿತೇಶ್ ಸಹೋದರಿಗೆ ವಿಷಯ ತಿಳಿದು ಅವರು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರ ಸಹೋದರಿ ನೀತಾ ಅವರ ಪತಿ ಲೋಹಿತ್ ಅವರು ನಿತೇಶ್ ನನ್ನು ಮಾತನಾಡಲು ಯತ್ನಿಸಿದಾಗ ಕಿರುದನಿಯಲ್ಲಿ ಅವಿನಾಶ್, ದಿನೇಶ್, ಉಮೇಶ್ ಎಂಬವರ ಹೆಸರನ್ನು ಹೇಳಿದ್ದರು. ಅದರಂತೆ ಮೂವರು ಸೇರಿ ನಿತೇಶ್ ಗೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತಪ್ಪಿಸಿ ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಬಿದ್ದಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ನಿತೇಶ್ ಸಹೋದರಿ ನೀತಾ ಲೋಹಿತ್ ಶೆಟ್ಟಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಿತೇಶ್ ಬಿದ್ದಿದ್ದ ಸ್ಥಳದಲ್ಲಿ ಅವರ ಮೊಬೈಲ್ ಮತ್ತು ಒಂದು ಷೂ ನಾಪತ್ತೆಯಾಗಿತ್ತು. ಅಲ್ಲದೆ ಅವರು ಉಪಯೋಗಿಸುತ್ತಿದ್ದ ಬೈಕ್ ಕೂಡಾ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ನಿತೇಶ್ ಅವರ ಬೈಕನ್ನು ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಯಾರೋ ತಂದಿಟ್ಟಿದ್ದು. ಇದು ನಿತೇಶ್ ಸಾವಿನಲ್ಲಿ ಕೆಲವರ ಕೈವಾಡ ಇರುವುದನ್ನು ದೃಢೀಕರಿಸಿದೆ. ಸ್ಥಳಕ್ಕೆ ಶ್ವಾನದಳ ಬಂದಿತ್ತಾದರೂ ಸ್ಥಳದಲ್ಲಿ ಯಾವುದೇ ಕುರುಹುಗಳು ಇಲ್ಲದೇ ಇದ್ದುದರಿಂದ ವಾಪಸ್ಸಾಗಿದ್ದಾರೆ.