ಬೆಳ್ತಂಗಡಿ: ಸಿದ್ಧರಾಮಯ್ಯ ಸರಕಾರದ ಪರ್ಸಂಟೇಜ್ ವ್ಯವಹಾರದಿಂದಾಗಿ ಜನ ರೋಸಿಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಬರಲಿದೆ ಎಂದು ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈಗಾಗಲೇ ಒಂದು ಸುತ್ತಿನ ಮನೆ ಮನೆ ಭೇಟಿ ಕಾರ್ಯಕ್ರಮ ಮುಗಿದಿದೆ. ನರೇಂದ್ರ ಮೋದಿಯವರ ದಕ್ಷ, ಪರಿಣಾಮಕಾರಿ ಆಡಳಿತದ ಸಾಧನೆ ಜನ ಮೆಚ್ಚುಗೆ ಪಡೆದಿದೆ. ದೇಶದ ಆರ್ಥಿಕತೆ, ಭದ್ರತೆ ಪ್ರಬಲವಾಗಿರುವುದು ಜನ ಸಾಮಾನ್ಯರಿಗೆ ಅರ್ಥವಾಗಿದೆ. ಇದರ ಪರಿಣಾಮ ರಾಜ್ಯದಲ್ಲೂ ಜನತೆ ಬಿಜೆಪಿಯ ಕೈ ಹಿಡಿಯಲಿದ್ದಾರೆ ಎಂದರು.
ಐದು ವರ್ಷಗಳ ಹಿಂದೆ ಸಿದ್ಧರಾಮಯ್ಯ ಸರಕಾರ ಗೆದ್ದು ಯಾವ ಮಾತನ್ನೂ ಉಳಿಸಿಕೊಂಡಿಲ್ಲ. ಬಿಜೆಪಿ ಸರಕಾರ ಇರುವಾಗ ಜಾರಿಗೆ ತಂದ 94ಸಿಸಿಯಲ್ಲಿ ಹಕ್ಕುಪತ್ರದ ವ್ಯವಸ್ಥೆ ಇನ್ನೂ ಬಾಕಿ ಇದೆ. ಜಾತಿ-ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ತರಲಾಗಿದೆ. 24 ಹಿಂದು ಕಾರ್ಯಕರ್ತರ ಹತ್ಯೆಯಾಗಿದ್ದು ಆರೋಪಿಗಳನ್ನು ಹಿಡಿಯುವಲ್ಲಿ ವಿಫಲವಾಗಿದೆ. ಆಶ್ರಯ ಮನೆ ಕಟ್ಟಲು ಹಣ ನೀಡುತ್ತಿಲ್ಲ. ಕೇಂದ್ರ ಸರಕಾರ ನೀಡಿದ ಅನುದಾನದಲ್ಲಿ ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆಯೇ ಹೊರತು ಗ್ರಾಮೀಣ ಅಭಿವೃದ್ಧಿಯಲ್ಲಿ ಹಣ ಎಷ್ಟು ಬಂದಿದೆ ವಿನಿಯೋಜನೆ ಹೇಗೆ ಆಗಿದೆ ಎಂದು ತಿಳಿಸಲಿ ಎಂದರು.
ಮರಳುಗಾರಿಕೆ ಸಾಗಾಟವನ್ನು ತನ್ನ ಕಾರ್ಯಕರ್ತರಿಗೆ ನೀಡಿರುವ ಸರಕಾರ ಪರ್ಸಂಟೇಜ್ ವ್ಯವಹಾರದಲ್ಲಿ ಮುಳುಗಿ ಹೋಗಿದೆ. ಸರಕಾರದ ಈ ಎಲ್ಲಾ ನಿಲುವುಗಳಿಂದ ಜನತೆ ರೋಸಿ ಹೋಗಿದ್ದು, ಈ ಬಾರಿ ಬಿಜೆಪಿಯ ಕೈ ಹಿಡಿಯಲಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಹರೀಶ್ ಪೂಂಜ ನಿಶ್ಚಯವಾಗಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ವಿಭಾಗ ಸಹ ಪ್ರಭಾರಿ ಪ್ರತಾಪಸಿಂಹ ನಾಯಕ್ ಅವರು, ಈ ಬಾರಿ ಕಮ್ಯುನಿಸ್ಟ್, ಎಸ್ಡಿಪಿಐ ಹಾಗು ಕಳೆದ 30 ವರ್ಷಗಳಿಂದ ಪರಸ್ಪರ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿರುವ ಗಂಗಾಧರ ಗೌಡರು ಬಂಗೇರರಿಗೆ ಬೆಂಬಲ ಸೂಚಿಸಿರುವುದು ಅವಕಾಶವಾದಿ ರಾಜಕೀಯವಲ್ಲದೆ ಮತ್ತೇನು? ದಿಗ್ಗಜರು ಒಂದುಗೂಡುವಷ್ಟು ವಾತಾವರಣ ಬಂದಿದೆ ಎಂದಾದರೆ ನಮ್ಮ ಹರೀಶ್ ಪೂಂಜ ಅವರ ಗೆಲುವು ಸುಗಮವಾಗಲಿದೆ. ಶಾಸಕ ಸ್ಥಾನವೆಂಬುದು ಕೆಲವೇ ವ್ಯಕ್ತಿಗಳಿಗೆ ಸೀಮಿತವಲ್ಲ. ಸಾಮಾನ್ಯ ನಾಗರಿಕನಿಗೂ ಇಲ್ಲಿ ಗೆಲ್ಲುವ ಅವಕಾಶ ಇದೆ. ಇದು ಪ್ರಜಾಪ್ರಭುತ್ವದ ಲಕ್ಷಣ ಎಂದರು.
ಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಸುವರ್ಣ, ವಕೀಲ ಸುಬ್ರಹ್ಮಣ್ ಕುಮಾರ್ ಅಗರ್ತ, ಸದಾನಂದ ಪೂಜಾರಿ ಉಂಗಿಲಬೈಲು, ಮಂಡಲ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೀತಾರಾಮ ಬಿ.ಎಸ್., ರಾಜೇಶ್ ಪೆಂರ್ಬುಡ ಇದ್ದರು.