ಉಳ್ಳಾಲ: ರೈತ ನಾಯಕ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ಗಡಗಡ ನಡುಗುತಿತ್ತು. ಅಂತಹ ನಾಯಕ ಯಡಿಯೂರಪ್ಪ ರಾಜಕೀಯ ವಿಚಾರದಲ್ಲಿ ಪಳಗಿದವರು, ರೈತರ ಸಾಲಮನ್ನಾ ಮಾಡುವಲ್ಲಿ ಪಾದಯಾತ್ರೆ ನಡೆಸಿ ಯಶಸ್ವಿಯಾದವರು . ಈ ಮೂಲಕ ಬಿಜೆಪಿ ರೈತರ ಕಾಳಜಿಯುಳ್ಳ ಪಕ್ಷ ಎಂದು ತೋರಿಸಿಕೊಟ್ಟವರು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಅವರು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸುತ್ತಿರುವ ಕ್ಷಣದ ಸಂಭ್ರಮಾಚರಣೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದರು.
ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಆಧಾರದಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬೇಕಿತ್ತು. ಆದರೆ ಕಾಂಗ್ರೆಸ್ -ಜೆಡಿಎಸ್ ಸೇರಿಕೊಂಡು ಅನೈತಿಕ ರಾಜ್ಯಭಾರ ನಡೆಸಿ ಇಂದು ದುರಂತಕ್ಕೀಡಾಗಿದೆ. ಇಂತಹ ರಾಜ್ಯಭಾರದಿಂದ ರೋಸಿಹೋದ ಸ್ವಪಕ್ಷೀಯ 15 ಮಂದಿ ಶಾಸಕರು ಪಕ್ಷದ ಹಿರಿಯ ನಾಯಕರ ಮಾತುಗಳನ್ನು ಲೆಕ್ಕಿಸದೆ ಮುಂಬೈನಲ್ಲಿ ಕುಳಿತಿದ್ದಾರೆ. ಸರಕಾರ ಹೋಗಬೇಕೆನ್ನುವ ಅಭಿಲಾಷೆಯಿಂದ ಕುಳಿತಿರುವುದು ವಿಪರ್ಯಾಸ. ಈ ನಡುವೆ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸೇರಿಕೊಂಡು ಬಿಜೆಪಿ ಕೈವಾಡವಿದೆ ಅನ್ನುವ ಹೇಳಿಕೆ ಬಾಲಿಷತನವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗುವ ಮೂಲಕ ಕರ್ನಾಟಕದಲ್ಲಿ ಹೊಸ ಆಯಾಮ ನಿರ್ಮಾಣವಾಗಿದೆ. ಮುಂದೆ 20 ಅತೃಪ್ತರ ಕ್ಷೇತ್ರಗಳಲ್ಲಿ ಚುನಾವಣೆ ನಡೆದಾಗ ಬಿಜೆಪಿ ಗೆಲ್ಲುವುದು ಖಚಿತ ಎಂದರು.
ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಹೊಸ ಅಭಿವೃದ್ಧಿಯ ಇತಿಹಾಸವನ್ನು ಬರೆಯಲಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶವನ್ನು ಸರಕಾರ ಇಟ್ಟುಕೊಂಡಿದೆ. ರಾಜ್ಯದ ಜನತೆ ಚುನಾವಣೆಯಲ್ಲಿ ಆರಿಸಿದ ಪಕ್ಷವೇ ಸರಕಾರ ರಚಿಸುವ ಮೂಲಕ ಜನತೆಗೆ ನ್ಯಾಯವನ್ನು ನೀಡಿದೆ ಎಂದರು.
ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿತಿಂಡಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ ಉಳ್ಳಾಲ,ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಉಚ್ಚಿಲ್, ಜಿಲ್ಲಾ ಪಂ.ಸದಸ್ಯೆ ಧನಲಕ್ಷೀ ಗಟ್ಟಿ, ಹಿರಿಯರಾದ ಸೀತಾರಾಮ ಬಂಗೇರ, ಲಲಿತಾ ಸುಂದರ್, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ತಲಪಾಡಿ ಪಂ.ಅಧ್ಯಕ್ಷರಾದ ಸುರೇಶ್ ಆಳ್ವ, ಸೋಮೇಶ್ವರ ಪುರಸಭೆ ಅಧ್ಯಕ್ಷರಾದ ರಾಜೇಶ್ ಉಚ್ಚಿಲ್, ಪ್ರಮುಖರಾದ ಮೋಹನ್ ದಾಸ್ ಶೆಟ್ಟಿ, ಯಶವಂತ ಅಮೀನ್, ಹರಿಯಪ್ಪ ಸಾಲ್ಯಾನ್, ಪ್ರಕಾಶ್, ಸುರೇಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದಯಾನಂದ ತೊಕ್ಜೊಟು, ನಗರಸಭೆ ಸದಸ್ಯರಾದ ಗೀತಾ ಬಾಯಿ, ರಾಜೇಶ್ ಇನ್ನಿತರರು ಉಪಸ್ಥಿತರಿದ್ದರು.