ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು 4ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ನಗರದ ಜೆಸಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ನಗರ ಮೋರ್ಚಾ ಕಾರ್ಯಕರ್ತರು ಸೇರಿ ಸರಳ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚಿಸಿದ ಮೇರೆಗೆ ಶುಕ್ರವಾರ ರಾಜ್ಯ ಪಾಲರಿಂದ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಸಂತಸವಾಗುತ್ತಿದೆ ಎಂದು ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಬಳಕ ಮಾತನಾಡಿದ ನಗರಾಧ್ಯಕ್ಷ ಎಚ್.ಆರ್. ಅರವಿಂದ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅವರು ಅಧಿಕಾರ ದಾಹದಿಂದ ಒಗ್ಗೂಡಿ, ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ರಾಜ್ಯದಲ್ಲಿ ಅಭಿವೃದ್ದಿ ಯೋಜನೆಗಳನ್ನು ಜಾರಿ ಮಾಡದೆ, ಸರ್ಕಾರ ಉಳಿಸಿಕೊಳ್ಳಲು ರೇಸಾರ್ಟ್ನಲ್ಲೇ ಕಾಲಕಳೆದು ಜನರಿಗೆ ದ್ರೋಹ ಬಗೆಯುತ್ತಿದ್ದರು ಎಂದು ಹೇಳಿದರು.
ಸರ್ಕಾರ ರಚಿಸಲು ಸರಳ ಬಹುಮತವಿದ್ದರೂ ಬಿಜೆಪಿ ಸರ್ಕಾರ ರಚನೆ ಅವಕಾಶ ನೀಡದೆ ವಾಮಮಾರ್ಗದಲ್ಲಿ ಮೈತ್ರಿ ರಚಿಸಿಕೊಂಡು, ಕಾಂಗ್ರೆಸ್ ಮತ್ತು ಜೆಡಿ ಎಸ್ ಶಾಸಕರು ಮಂತ್ರಿಗಿರಿಗಾಗಿ ಪ್ರತಿದಿನ ಶೀತಲ ಸಮರ ನಡೆಸುತ್ತಿದ್ದದ್ದು ಜನರಿಗೆ ಬೇಸರ ತರಿಸಿತ್ತು ಎಂದು ನುಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ. ಅಶೋಕ್ಕುಮಾರ್, ವಿವೇಕ್, ಹನುಮಂತ್, ನರಸಿಂಹ, ನೆರಳುಕೃಷ್ಣ, ರಮೇಶ್, ಮಹೇಶ್, ಹನುಮಂತು, ಅಶೋಕ್, ಕೃಷ್ಣ, ನಾಗಾನಂದ್, ಲೋಕೇಶ್, ಮಹೇಶ್, ನರಸಿಂಹ, ಪುಟ್ಟಸ್ವಾಮಿ, ವಿಜಯಲಕ್ಷ್ಮಿ ಇತರರಿದ್ದರು.