ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ನಡುವಿನ ಅಣ್ಣಳಿಕೆ ತಿರುವು ರಸ್ತೆಯಲ್ಲಿ ಕೃತಕ ಕೆರೆ ಮಾದರಿಯಲ್ಲಿ ಬೃಹತ್ ಗಾತ್ರದ ಹೊಂಡ ಕಾಣಿಸಿಕೊಂಡಿದ್ದು, ಎಚ್ ಪಿಸಿಎಲ್ ಗ್ಯಾಸ್ ಪೈಪ್ಲೈನ್ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆಯಷ್ಟೇ ಮಂಗಳೂರು-ಬೆಂಗಳೂರು ಮಾರ್ಗವಾಗಿ ಗ್ಯಾಸ್ ಪೂರೈಸಲು ಇಲ್ಲಿ ಪೈಪ್ಲೈನ್ ಅಳವಡಿಕೆ ಕಾಮಗಾರಿಗೆ ರಸ್ತೆ ಅಗೆದು ಹಾಕಿರುವುದನ್ನು ತಾಲ್ಲೂಕು ಪಂಚಾಯಿತ್ ಸದಸ್ಯರಾಗಿದ್ದ ವಸಂತ ಕುಮಾರ್ ಸಹಿತ ಸ್ಥಳೀಯರು ಧಾವಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಎಚ್ ಪಿಸಿಎಲ್ ಅಧಿಕಾರಿಗಳು ಧಾವಿಸಿ ಬಂದು ಇಲ್ಲಿನ ತಿರುವು ರಸ್ತೆ ವಿಸ್ತರಣೆಗೊಳಿಸಿ ರಸ್ತೆಗೆ ಮರು ಡಾಂಬರೀಕರಣ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಂಡಿದ್ದರು. ಅಂದು ಪೈಪ್ಲೈನ್ ಕಾಮಗಾರಿ ಮುಗಿಸಿದ ಬಳಿಕ ಕೇವಲ ರಸ್ತೆ ವಿಸ್ತರಣೆಗೊಳಿಸಿ ಕಾಟಾಚಾರಕ್ಕೆ ಡಾಂಬರೀಕರಣ ಕಾಮಗಾರಿ ನಡೆಸಿ ಅಧಿಕಾರಿಗಳು ಮತ್ತು ಎಂಜಿನಿಯರ್ ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೀಗ ತಿರುವು ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ಇರುವ ಬಗ್ಗೆ ಮಾಹಿತಿ ತಿಳಿಯದೆ ಈಗಾಗಲೇ ಹಲವಾರು ದ್ವಿಚಕ್ರ ವಾಹನ ಸವಾರರು ಹೊಂಡ ಮತ್ತು ರಸ್ತೆ ಬದಿ ಚರಂಡಿಗೆ ಉರುಳಿ ಬೀಳುತ್ತಿದ್ದಾರೆ. ಇದರಿಂದಾಗಿ ವಾಹನ ಅಪಘಾತಕ್ಕೂ ಕಾರಣವಾಗಿದ್ದು, ಕೂಡಲೇ ಹೊಂಡ ಮುಚ್ಚಿ ಕಾಂಕ್ರಿಟೀಕರನ ಕಾಮಗಾರಿ ನಡೆಸುವಂತೆ ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.