ಬೆಳ್ತಂಗಡಿ: ಪ್ರವಾಸಿ ತಾಣಗಳು ಮನಸೋಲ್ಲಾಸ ತಂದುಕೊಡುತ್ತವೆಯಾದರೂ ಕೆಲವೊಂದು ಬಾರಿ ಆಡಳಿತದ ನಿರ್ಲಕ್ಷದಿಂದ ಅಥವಾ ಪ್ರವಾಸಿಗರ ಭಂಡ ಧೈರ್ಯದಿಂದ ಪ್ರಾಣಕ್ಕೆ ಎರವಾಗುವುದೂ ಉಂಟು.
ಬೆಳ್ತಂಗಡಿ ತಾಲೂಕಿನಲ್ಲಿ ಚಾರ್ಮಾಡಿ ಕಣಿವೆಯ ವ್ಯಾಪ್ತಿಯಲ್ಲಿ ಕಡಿರುದ್ಯಾವರ ಗ್ರಾಮದ ಬಂಡಾಜೆ-ಆನಡ್ಕ ಅಬ್ಬಿ ಜಲಪಾತ, ಮಲವಂತಿಗೆ ಗ್ರಾಮದಲ್ಲಿರುವ ದಿಡುಪೆ ಜಲಪಾತ ಹಾಗು ಮಿತ್ತಬಾಗಿಲು ಹಾಗು ಮಲವಂತಿಗೆ ಗ್ರಾಮದ ಗಡಿಭಾಗದಲ್ಲಿರುವ ಎರ್ಮಾಯಿ ಜಲಪಾತ ಎಂಬ ಮೂರು ಪ್ರಮುಖ ಎತ್ತರದಿಂದ ನೀರು ಬೀಳುವ ಪ್ರದೇಶಗಳಿವೆ.
ಮೂರು ಜಲಪಾತಗಳು ಆಕರ್ಷಣೀಯವಾಗಿ, ಮನಮೋಹಕವಾಗಿದ್ದು ನೀರಾಟ ಆಡಲು ಆಕರ್ಷಿಸುವಂತಿದೆಯಾದರೂ ಅಷ್ಟೇ ಅಪಾಯಕಾರಿಯಾಗಿಯೂ ಇದೆ. ಎರ್ಮಾಯಿ ಫಾಲ್ಸ್ ನಲ್ಲಿ ಕಳೆದ ಒಂದು ವರ್ಷದಲ್ಲಿ ಮೂವರು ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಹತ್ತು ದಿನಗಳ ಹಿಂದೆ ಇಲ್ಲಿ ಚಲನಚಿತ್ರ ನಿರ್ದೇಶಕರೊಬ್ಬರು ಸಾವನ್ನಪ್ಪಿದ್ದರು.
ಬೆಳ್ತಂಗಡಿ ತಾಲೂಕಿನಿಂದ ಸುಮಾರು 30 ರಿಂದ 35 ಕಿ.ಮೀ.ದೂರದಲ್ಲಿವೆ ಈ ಮೂರು ಜಲಪಾತಗಳು. ಮಳೆಗಾಲದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಇಲ್ಲಿನ ಜಲಧಾರೆಯನ್ನು ನೋಡಲು ಪ್ರವಾಸಿಗರ ಹಿಂಡೇ ಬರುತ್ತಿದೆ. ಹೀಗಾಗಿ ಇಲ್ಲಿನ ಸ್ಥಿತಿಗತಿಯ ಬಗ್ಗೆ ಮಾರ್ಗದರ್ಶನ, ಮಾಹಿತಿ ನೀಡಲು ಓರ್ವ ರಕ್ಷಕನನ್ನು ಆಡಳಿತವೇ ನೇಮಿಸಿದರೆ ಒಳ್ಳೆಯದು. ಇದರಿಂದ ಮುಂದಾಗುವ ಅನಾಹುತಗಳನ್ನು ತಡೆಯಬಹುದಲ್ಲದೆ ಪರಿಸರವು ಪ್ಲಾಸ್ಟಿಕ್, ಬಾಟಲಿ ಇತ್ಯಾದಿ ತ್ಯಾಜ್ಯಗಳಿಂದ ಹಾಳಾಗುವುದನ್ನೂ ತಡೆಯಬಹುದು ಎಂಬುದು ಪ್ರವಾಸಿಗರ ಮಾತ್ರವಲ್ಲದೆ ಸ್ಥಳೀಯರ ಅಭಿಪ್ರಾಯವೂ ಆಗಿದೆ.
ನೀರಿರುವ ಹೆಚ್ಚು ಆಳವಿಲ್ಲದ ಜಾಗದಲ್ಲಿ ಮಾತ್ರ ಪ್ರವಾಸಿಗರಿಗೆ ಕಾಲ ಕಳೆಯುವ ಅವಕಾಶ ನೀಡುವುದು, ಅಲ್ಲದೆ ನೇಮಕವಾದ ಸಿಬ್ಬಂದಿಗೆ ಹಾಗೂ ಇನ್ನಿತರ ಉಪಯೋಗಕ್ಕಾಗಿ ಪ್ರವಾಸಿಗರಿಗೆ ಕನಿಷ್ಠ ಶುಲ್ಕ ವಿಧಿಸುವುದು, ರಾತ್ರಿ ವೇಳೆ ಇಲ್ಲಿ ತಂಗುವುದನ್ನು ನಿಷೇಧಿಸುವುದು, ಕಾನೂನು ಬಾಹಿರ ಚಟುವಟಿಕೆಗಳಿಗೆ, ಮದ್ಯಪಾನಕ್ಕೆ ಅವಕಾಶ ನೀಡದಿರುವುದು( ಈ ನಿಯಮಗಳನ್ನು ಈಗಾಗಲೇ ನರಸಿಂಹ ಗಡ (ಗಡಾಯಿಕಲ್ಲು)ಪ್ರವಾಸಿಗರಿಗಾಗಿ ಮಾಡಲಾಗಿವೆ) ಜಲಪಾತಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ದಿ ಪಡಿಸವುದು ಇತ್ಯಾದಿ ಬೇಡಿಕೆಗಳನ್ನು ಸ್ಥಳೀಯರು ಇಡುತ್ತಿದ್ದಾರೆ. ಹಾಲಿ ಶಾಸಕರಿಗೆ ಪ್ರವಾಸೋದ್ಯಮವನ್ನು ಬೆಳೆಸುವುದರಲ್ಲಿ ಹೆಚ್ಚಿನ ಉತ್ಸುಕತೆ ಇರುವುದರಿಂದ ಅವರು ಜಲಪಾತಗಳ ಸಂರಕ್ಷಣೆಗೆ ಹಾಗೂ ಪ್ರವಾಸಿಗರ ಅನುಕೂಲತೆಗಳ ಬಗ್ಗೆ ಆದಷ್ಟು ಶೀಘ್ರವಾಗಿ ಚಿಂತಿಸಿ ಕಾರ್ಯೋನ್ಮುಖರಾದಲ್ಲಿ ಇನ್ನಷ್ಟು ಆಗುವ ಅನಾಹುತಗಳನ್ನು ತಡೆಯಬಹುದಾಗಿದೆ.
ಜಲಪಾತಗಳಿಗೆ ಸಬಂಧಪಟ್ಟಂತೆ ಆಡಳಿತ ಈಗಾಗಲೇ ಸಂಪೂರ್ಣ ನಿರಾಸಕ್ತಿ ತೋರಿಸಿದೆ. ತಕ್ಷಣವೇ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಬೇಕು. ಅಲ್ಲಿಯವರೆಗೆ ಪ್ರವಾಸಿಗರು ಅಲ್ಲಿ ಹೋಗುವುದನ್ನು ನಿಷೇಧಿಸಬೇಕು. ಜಲಪಾತಗಳ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ಸುರಕ್ಷತತೆಗಾಗಿ ಇನ್ನೂ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಮಿತ್ತಬಾಗಿಲು ಗ್ರಾ.ಪಂ.ನ ಎದುರು ಜೂ.6 ರಂದು ಸಮಾನ ಮನಸ್ಕರೊಂದಿಗೆ ಸೇರಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಗಾಡಿ,